ದಸರಾ ಸಿದ್ಧತೆ: ಮರದ ಅಂಬಾರಿ ಹೊತ್ತು ಸಾಗಿದ ‘ಅರ್ಜುನ’
ದಸರಾ ಆನೆಗಳಿಗೆ ಭಾರ ಹೊರುವ ತಾಲೀಮು
ಮೈಸೂರು, ಸೆ.19: ವಿಶ್ವವಿಖ್ಯಾತ ದಸರಾ ಮಹೋತ್ಸವ ಹಿನ್ನೆಲೆಯಲ್ಲಿ ಗಜ ಪಡೆಗೆ ಗುರುವಾರ ಭಾರ ಹೊರುವ ತಾಲೀಮು ನಡೆಸಲಾಯಿತು.
ಮರದ ಅಂಬಾರಿ ಹೊತ್ತು ಕ್ಯಾಪ್ಟನ್ ಅರ್ಜುನ ಸಾಗಿದ್ದು, ಸುಮಾರು 350 ಕೆ.ಜಿ. ತೂಕದ ಮರದ ಅಂಬಾರಿ, 300 ಕೆ.ಜಿ. ತೂಕದಷ್ಟು ಮರಳು ಮೂಟೆ ಸೇರಿದಂತೆ ಒಟ್ಟು 650 ಕೆಜಿ ತೂಕವನ್ನು ಹೊತ್ತು ಸಾಗಿದ್ದು ಕಂಡು ಬಂತು. ದಸರಾ ಗಜ ಪಡೆಗೆ ಅರಣ್ಯಾಧಿಕಾರಿಗಳು ಕೊನೆಯ ಹಂತದ ತಾಲೀಮು ನೀಡುತ್ತಿದ್ದು, ಡಿಸಿಎಫ್ ಅಲೆಕ್ಸಾಂಡರ್, ಪಶು ವೈದ್ಯ ಡಾ.ನಾಗರಾಜ್ ಮಾರ್ಗದರ್ಶನದಲ್ಲಿ ಆನೆ ಬೆನ್ನಿಗೆ ಮಾವುತರು, ಕಾವಾಡಿಗಳು ಮರದ ಅಂಬಾರಿ ಕಟ್ಟಿದರು. ಅರಮನೆ ಆವರಣದಲ್ಲಿರುವ ಕ್ರೇನ್ ಮೂಲಕ ಆನೆ ಬೆನ್ನಿಗೆ ಅಂಬಾರಿ ಕಟ್ಟಿದ್ದು, ಅರಮನೆ ಆವರಣದಿಂದ ಬನ್ನಿ ಮಂಟಪದವರಗೆ ಗಜ ಗಾಂಭೀರ್ಯದ ಕ್ಯಾಪ್ಟನ್ ಅರ್ಜುನ ಹೆಜ್ಜೆ ಹಾಕಿದ.
ಈ ಸಂದರ್ಭ ಪಶು ವೈದ್ಯ ನಾಗರಾಜ್ ಮಾತನಾಡಿ, ಮೊದಲ ತಂಡದ ನಾಲ್ಕು ಆನೆಗಳಿಗೆ ಈ ತಾಲೀಮನ್ನು ನಡೆಸಲಾಗುವುದು. ಈ ದಿನ ಮೊದಲಿಗೆ ಅರ್ಜುನನಿಗೆ 600 ಕೆ.ಜಿ. ಭಾರ ಹೊರಿಸಲಾಗುವುದು. ನಂತರ ಮುಂದಿನ ದಿನಗಳಲ್ಲಿ ಧನಂಜಯ, ಅಭಿಮನ್ಯು, ಮತ್ತು ಈಶ್ವರನಿಗೆ ತಾಲೀಮು ನೀಡಲಾಗುವುದು ಎಂದರು.