ಸರ್ಕಾರಿ ಸೌಲಭ್ಯಗಳನ್ನು ಅರ್ಹರಿಗೆ ತಲುಪಿಸಿ: ಸಚಿವ ಕೆ.ಎಸ್.ಈಶ್ವರಪ್ಪ
ದಾವಣಗೆರೆ ಜಿ.ಪಂ. ಪ್ರಗತಿ ಪರಿಶೀಲನಾ ಸಭೆ
ದಾವಣಗೆರೆ, ಸೆ.19: ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅನುದಾನದಿಂದ ನೀಡಲಾಗುವ ಸೌಲಭ್ಯಗಳು ಎಲ್ಲ ಅರ್ಹ ಜನತೆಗೆ ತಲುಪುವಂತೆ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಕಾರ್ಯ ನಿರ್ವಹಿಸಬೇಕು ಹಾಗೂ ಇಲಾಖೆಗಳಿಗೆ ನೀಡಲಾದ ನಿಗದಿತ ಗುರಿ ತಲುಪಲು ಶ್ರಮಿಸಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.
ಜಿ.ಪಂ ಸಭಾಂಗಣದಲ್ಲಿ ಏರ್ಪಡಿಸಿದ್ದ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಇಂದಿನ ಆರ್ಡಿಪಿಆರ್ ಪ್ರಗತಿ ವರದಿ ಪ್ರಕಾರ ಜಿಲ್ಲೆಯು ಪ್ರಗತಿ ಸಾಧನೆಯಲ್ಲಿ ಕೊಂಚ ಹಿಂದಿದೆ. ಮುಂದಿನ ದಿನಗಳಲ್ಲಿ ಜಿಲ್ಲಾಧಿಕಾರಿ, ಜಿ.ಪಂ ಸಿಇಓ ಇವರ ಜೊತೆ ಚರ್ಚಿಸಿ, ಗುರಿ ಸಾಧನೆಯೆಡೆ ಕಾರ್ಯೋನ್ಮುಖವಾಗಬೇಕು. ಅಕ್ಟೋಬರ್ 11 ರಂದು ನಡೆಯುವ ಕೆಡಿಪಿ ಸಭೆಯಲ್ಲಿ ಎಲ್ಲ ಇಲಾಖೆಗಳ ಪ್ರಗತಿಯನ್ನು ಪರಿಶೀಲಿಸುತ್ತೇನೆ. ಆ ವೇಳೆಗೆ ನಿಗದಿತ ಗುರಿ ತಲುಪಲು ಇಂದಿನಿಂದಲೇ ಶ್ರಮಿಸಬೇಕೆಂದರು.
ಈ ಹಿಂದೆ ನಾನು ನೀರಾವರಿ ಸಚಿವರಾಗಿದ್ದಾಗ ಸಿರಿಗೆರೆ ಶ್ರೀಗಳು ಈ ಭಾಗದ ಕೆರೆಗಳನ್ನು ತುಂಬಿಸಲು ಆದೇಶಿಸಿದ್ದರು. ಈ ಬಗ್ಗೆ ಸಚಿವ ಸಂಪುಟದಲ್ಲಿ ಅನುಮೋದನೆ ಪಡೆದು ಕಾರ್ಯ ನಿರ್ವಹಿಸಲಾಗುವುದು ಎಂದ ಅವರು, ಸ್ನೇಹಕ್ಕೆ ಮತ್ತೊಂದು ಹೆಸರು ದಾವಣಗೆರೆಯಾಗಿದ್ದು, ಎಲ್ಲ ಜನಪ್ರತಿನಿಧಿಗಳು, ಅಧಿಕಾರಿಗಳು, ಶರಣರ, ಮಠಮಾನ್ಯಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅಭಿವೃದ್ಧಿ ಕಾರ್ಯಗಳನ್ನು ಜಿಲ್ಲೆಯಲ್ಲಿ ಕೈಗೊಳ್ಳುತ್ತೇನೆ ಎಂದರು.
ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಮಾತನಾಡಿ, ಮಳೆಗಾಲ ಮುಗಿದರೂ ಜಿಲ್ಲೆಯಲ್ಲಿರುವ ಹಲವಾರು ಬೋರ್ವೆಲ್ಗಳು ರೀಚಾರ್ಜ್ ಆಗದ ಕಾರಣ ದಾವಣಗೆರೆಯ 13 ಗ್ರಾಮಗಳು, ಹೊನ್ನಾಳಿ 2, ಜಗಳೂರು ತಾಲೂಕಿನ 80 ಮತ್ತು ಚನ್ನಗಿರಿಯ 1 ಗ್ರಾಮ ಸೇರಿದಂತೆ 101 ಗ್ರಾಮಗಳಿಗೆ ಟ್ಯಾಂಕರ್ ಮೂಲಕ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ. ಜಗಳೂರಿನಲ್ಲಿ ಮಳೆಯೇ ಆಗದ ಕಾರಣ ಬರದ ಸ್ಥಿತಿ ಇದ್ದು, ಇಲ್ಲಿನ ರಾಸುಗಳಿಗೆ ಮೇವಿನ ಕೊರತೆ ಎದುರಾಗಿದೆ. ಮಳೆಗಾಲಕ್ಕೂ ಮುನ್ನ ಜಗಳೂರು ತಾಲೂಕಿನ ಮೂರು ಸ್ಥಳಗಳಲ್ಲಿ ಗೋಶಾಲೆ ಸ್ಥಾಪಿಸಿ ಮೇವು ಒದಗಿಸಲಾಗುತ್ತಿತ್ತು. ಸದ್ಯಕ್ಕೆ ಹಿರೇಮಲ್ಲನಹೊಳೆ ಗ್ರಾಮದಲ್ಲಿ ಮಾತ್ರ ಒಂದು ಗೋಶಾಲೆ ಕಾರ್ಯ ನಿರ್ವಹಿಸುತ್ತಿದೆ ಎಂದರು.
ಜಗಳೂರು ಶಾಸಕ ಎಸ್.ವಿ.ರಾಮಚಂದ್ರ ಪ್ರತಿಕ್ರಿಯಿಸಿ, ತಾಲೂಕಿನಲ್ಲಿ ಮಳೆಯೇ ಆಗದೆ ಬರ ಸ್ಥಿತಿ ಉಂಟಾಗಿದೆ. ಆದ್ದರಿಂದ ಕೊಡದಗುಡ್ಡ, ಹಿರೇಮಲ್ಲನಹೊಳೆ ಸೇರಿದಂತೆ ಮೂರು ಕಡೆಯೂ ಗೋಶಾಲೆ ಮುಂದುವರೆಸಬೇಕು ಹಾಗೂ ಅವಶ್ಯವಿರುವೆಡೆ ಮೇವು ಬ್ಯಾಂಕ್ ಕೂಡ ಸ್ಥಾಪಿಸಬೇಕು ಎಂದು ಮನವಿ ಮಾಡಿದರು.
ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಮಾತನಾಡಿ, ಶಾಲೆಗಳಲ್ಲಿ ಮಕ್ಕಳ ಸಂಖ್ಯೆಗಳಿಗುಣವಾಗಿ ಶೌಚಾಲಯ ನಿರ್ಮಿಸುವುದು ಅವಶ್ಯಕ ಹಾಗೂ ಶೌಚಾಲಯ ಬಳಕೆಗೆ ನೀರಿನ ಲಭ್ಯತೆಯನ್ನು ನೋಡಿಕೊಂಡು ಪೂರೈಸಬೇಕಾಗಿರುತ್ತದೆ ಎಂದರು.
ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಖಾತರಿ ಇಲಾಖೆಯ ಆಯುಕ್ತ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಮಾತನಾಡಿ, ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಖಾತರಿ ಯೋಜನೆಯಡಿ ಜಿಲ್ಲೆಯಲ್ಲಿ 2018-19 ನೇ ಸಾಲಿನಲ್ಲಿ 33.87 ಲಕ್ಷ ಮಾನವ ದಿನಗಳ ಗುರಿ ಇದ್ದು, 39.33 ಮಾನವ ದಿನಗಳನ್ನು ಸೃಷ್ಠಿಸಿ ಶೇ.116.18 ಸಾಧನೆ ಮಾಡಲಾಗಿದೆ.
2019-20 ನೇ ಸಾಲಿನಲ್ಲಿ 11,23,500 ಮಾನವ ದಿನಗಳ ಗುರಿಯಲ್ಲಿ ಇಲ್ಲಿಯವರೆಗೆ 3,02,909 ಮಾನವ ದಿನಗಳನ್ನು ಸೃಷ್ಟಿಸಿ ಶೇ.27 ಪ್ರಗತಿ ಸಾಧಿಸಲಾಗಿದೆ. ಅರಣ್ಯ ಇಲಾಖೆ, ರೇಷ್ಮೆ ಮತ್ತು ತೋಟಗಾರಿಕೆ ಇಲಾಖೆಯ ಪ್ರಗತಿ ಕುಂಠಿತವಾಗಿದ್ದು, ಈ ಇಲಾಖೆಗಳ ಮುಖ್ಯಸ್ಥರು ನಿಗದಿತ ಗುರಿ ತಲುಪಲು ಶ್ರಮಿಸಬೇಕು ಎಂದು ಸೂಚನೆ ನೀಡಿದರು.
ಹರಿಹರ ಮತ್ತು ದಾವಣಗೆರೆಯಲ್ಲಿ ನರೇಗಾದಡಿ ಪ್ರಗತಿ ಕಡಿಮೆ ಇದೆ. ನೀರಾವರಿ ಪ್ರದೇಶವಾದರೂ ಹಳ್ಳ, ಶಾಲಾ ಮೈದಾನ ಅಭಿವೃದ್ಧಿ, ಸ್ಮಶಾನ ಅಭಿವೃದ್ಧಿ ಸೇರಿದಂತೆ ಇತರೆ ಅಭಿವೃದ್ಧಿ ಕಾಮಗಾರಿ ಕೈಗೊಂಡು ಪ್ರಗತಿ ಸಾಧಿಸಬೇಕು. ಜಗಳೂರಿನಲ್ಲಿ ಪ್ರಗತಿ ಹೆಚ್ಚಿದೆ. 2019-20 ನೇ ಸಾಲಿಲ್ಲಿನ 209.4 ಲಕ್ಷ ಕೂಲಿ ಮತ್ತು 2753.95 ಲಕ್ಷ ಒಟ್ಟು 2963.35 ಲಕ್ಷ ಪಾವತಿ ಬಾಕಿ ಇದೆ ಎಂದರು.
ನರೇಗಾದಡಿ ಮುಖ್ಯವಾಗಿ ಕೂಲಿ ಮತ್ತು ಸಾಮಗ್ರಿ ಅನುಪಾತವು 60:40 ಇರಬೇಕಿದೆ. ಆಗ ಮಾತ್ರ ಪಾವತಿ ಮಾಡಲು ಸಾಧ್ಯ. ಆದರೆ ಎಲ್ಲ ತಾಲೂಕುಗಳಲ್ಲಿ ಸಾಮಗ್ರಿ ಅನುಪಾತ 40ಕ್ಕಿಂತ ಹೆಚ್ಚಿದ್ದು, ಕೇಂದ್ರದ ಪೋರ್ಟಲ್ನಲ್ಲೇ ಲಾಕ್ ಆಗಿದೆ. ಕೇಂದ್ರಕ್ಕೆ ಜಿಲ್ಲೆಯ ವರದಿ ಕುರಿತು ಮನವರಿಕೆ ಮಾಡಿ ಲಾಕ್ ತೆಗಿಸಿ ಪಾವತಿಸಬೇಕಿದೆ. ಈ ಅನುಪಾತ ಸರಿ ಹೊಂದುವಂತೆ ಕಾಮಗಾರಿ ನಿರ್ವಹಿಸುವ ಕುರಿತು ತಾಲೂಕುಗಳ ಇಓಗಳು ಹೆಚ್ಚಿನ ಗಮನ ಮತ್ತು ಜವಾಬ್ದಾರಿ ವಹಿಸಬೇಕೆಂದರು. ಹಾಗೂ ಜಲಶಕ್ತಿ ಅಭಿಯಾನದಡಿ ನೀಡಲಾದ ಗುರಿಯನ್ನು ಸೆ.30 ರೊಳಗೆ ಸಾಧಿಸಬೇಕು ಎಂದರು.
ಶಾಸಕ ಎಸ್.ವಿ.ರಾಮಚಂದ್ರ ಮಾತನಾಡಿ, ರಾಜ್ಯದ ಅನೇಕ ಕಡೆಗಳಲ್ಲಿ ಅತಿವೃಷ್ಟಿಯಾಗಿದ್ದರೂ ಜಗಳೂರಿನಲ್ಲಿ ಮಾತ್ರ ಮಳೆ ಬಂದಿಲ್ಲ. 8 ವರ್ಷವಾದರೂ ಬಹುಗ್ರಾಮ ಯೋಜನೆ ಕಾರ್ಯರೂಪಕ್ಕೆ ಬಂದಿಲ್ಲ. 1000 ಅಡಿ ಕೊರೆದರೂ ಬೋರ್ಲ್ಲಿ ನೀರು ಸಿಗುತ್ತಿಲ್ಲ. ಈಗಲೂ ತಾಲ್ಲೂಕಿನ 54 ಗ್ರಾಮಗಳಿಗೆ ಟ್ಯಾಂಕರ್ ಮೂಲಕ ಕುಡಿಯುವ ನೀರು ಪೂರೈಸಲಾಗುತ್ತಿದ್ದು, ಈ ನೀರಿನಲ್ಲಿ ಓತಿಕೇತ, ಹುಳ, ಉಪ್ಪಡಿ ಸೇರಿರುತ್ತವೆ. ಹಾಗೂ ಇಲ್ಲಿನ ಇಂಜಿನಿಯರು ಕೂಡ ಸಮರ್ಪಕವಾಗಿ ಕರ್ತವ್ಯ ನಿರ್ವಹಿಸುತ್ತಿಲ್ಲವೆಂದು ದೂರಿದರು.
ಆಯುಕ್ತರು ಪ್ರತಿಕ್ರಿಯಿಸಿ, ತಾಲೂಕಿನ ಇಓ ಗಳು ಎಲ್ಲ ಕಾಮಗಾರಿಗಳ ಬಗ್ಗೆ ಮಾಹಿತಿ ಪಡೆದು ಉಸ್ತುವಾರಿ ನೋಡಿಕೊಳ್ಳಬೇಕು. ಕಾಳಜಿಯಿಂದ ಕೆಲಸ ನಿರ್ವಹಿಸಬೇಕು. ಹಾಗೂ ಶಿಥಿಲಗೊಂಡ ಓವರ್ಹೆಡ್ ಟ್ಯಾಂಕ್ಗಳನ್ನು ದೃಢೀಕರಣ ಪಡೆದುಕೊಂಡು ತೆರವುಗೊಳಿಸಬೇಕೆಂದು ಕಾರ್ಯಪಾಲಕ ಅಭಿಯಂತರರಿಗೆ ಸೂಚಿಸಿದರು.
ಸಂಸದ ಜಿ.ಎಂ.ಸಿದ್ದೇಶ್ವರ ಮಾತನಾಡಿ, ಸಂತೇಮುದ್ದಾಪುರ ಮತ್ತು 109 ಹಳ್ಳಿಗಳ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಬಹಳ ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದು, ಈ ಬಗ್ಗೆ ಇಂಜಿನಿಯರ್ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
ಶಾಸಕ ಎಸ್.ಎ ರವೀಂದ್ರನಾಥ್ ಮಾತನಾಡಿ, ರಾಜೀವ್ ಗಾಂಧಿ ಸಬ್ಮಿಷನ್ ಕುಡಿಯುವ ನೀರು ಯೋಜನೆ ಸರಿಯಾಗಿ ಅನುಷ್ಟಾನಗೊಂಡಿಲ್ಲ. ದಾವಣಗೆರೆ ತಾಲೂಕಿನ ಮಾಯಕೊಂಡ, ಹುಚ್ಚವ್ವನಹಳ್ಳಿ, ಬಸಾಪುರ ಸೇರಿದಂತೆ ಅನೇಕ ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿದೆ. ಈ ಯೋಜನೆಯನ್ನು ಚುರುಕುಗೊಳಿಸಿ ಇಲ್ಲಿಗೆ ನೀರು ಪೂರೈಸಲು ಆಗ್ರಹಿಸಿದರು.
ಆಯುಕ್ತರು ಮಾತನಾಡಿ, ಜಿಲ್ಲಾ ಟಾಸ್ಕ್ಫೋರ್ಸ್ ಅಡಿ ಅನುಮೋದಿತ 522 ಕಾಮಗಾರಿಗಳ ಪೈಕಿ 370 ಕಾಮಗಾರಿ ಪೂರ್ಣಗೊಂಡಿವೆ. ಉಳಿದವುಗಳನ್ನು ಉತ್ತಮ ಗುಣಮಟ್ಟದೊಂದಿಗೆ ನಿಗದಿತ ಅವಧಿಯಲ್ಲಿ ಪೂರ್ಣಗೊಳಿಬೇಕು. ಕೆಆರ್ಐಡಿಎಲ್ ವತಿಯಿಂದ ಕೈಗೊಳ್ಳಲಾದ ಕಾಮಗಾರಿ ಗುಣಮಟ್ಟ ಕಡಿಮೆ ಇದ್ದು, ಈ ಕಡೆ ಗಮನ ಹರಿಸಬೇಕು ಎಂದರು.
ಕೆಆರ್ಐಡಿಎಲ್ ಮತ್ತು ಇತರೆ ಸಂಸ್ಥೆಗಳಿಂದ ಕಾರ್ಯ ನಿರ್ವಹಿಸುತ್ತಿರುವ ಒಟ್ಟು 760 ಶುದ್ದ ಕುಡಿಯುವ ನೀರಿನ ಘಟಕಗಳ ಸ್ಥಿತಿಗತಿ ಕುರಿತು ತಮಗೆ ವರದಿ ನೀಡಬೇಕು ಹಾಗೂ ದುರಸ್ತಿ, ನಿರ್ವಹಣೆ ಕುರಿತು ಛಾಯಾಚಿತ್ರ ಸಮೇತ ಮಾಹಿತಿ ನೀಡಬೇಕೆಂದು ಸಚಿವರು ಕೆಆರ್ಐಡಿಎಲ್ ಅಧಿಕಾರಿಗೆ ಸೂಚಿಸಿದರು.
ಜಿ.ಪಂ. ಉಪಾಧ್ಯಕ್ಷ ಸುರೇಂದ್ರ ನಾಯ್ಕ, ಜಿ.ಪಂ.ನ ಸ್ಥಾಯಿ ಸಮಿತಿಗಳ ಅಧ್ಯಕ್ಷರುಗಳು, ಸದಸ್ಯರು, ಗ್ರಾಮೀಣಾಭಿವೃದ್ಧಿ ಸಚಿವರ ವಿಶೇಷಾಧಿಕಾರಿ ಜಯಕುಮಾರ್, ಗ್ರಾಮೀಣಾಭಿವೃದ್ದಿ ಮತ್ತು ಪಂ.ರಾ ಇಲಾಖೆಯ ನಿರ್ದೇಶಕ ಭುವನಹಳ್ಳಿ ನಾಗರಾಜು, ಜಿ.ಪಂ.ಸಿಇಓ ಪದ್ಮಾ ಬಸವಂತಪ್ಪ, ಎಸ್ಪಿ ಹನುಮಂತರಾಯ, ಜಿ.ಪಂ ಉಪ ಕಾರ್ಯದರ್ಶಿ ಜಗದೀಶ್ ಸೇರಿದಂತೆ ಇತರೆ ಅಧಿಕಾರಿಗಳು ಹಾಜರಿದ್ದರು.