ಯಡಿಯೂರಪ್ಪ ಪತ್ನಿ ಸಾವು ಸಹಜವಲ್ಲ, ಅನುಮಾನಾಸ್ಪದ: ಮಾಜಿ ಸಿಎಂ ಕುಮಾರಸ್ವಾಮಿ
ರಾಮನಗರ, ಸೆ.20: ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ವಿದ್ಯುಚ್ಛಕ್ತಿಯಲ್ಲಿ ಲೂಟಿ ಮಾಡಿದ್ದರು. ಅದನ್ನು ತನಿಖೆ ಮಾಡಿಸಿ ಎಂದು ಡಿ.ಕೆ.ಶಿವಕುಮಾರ್ಗೆ ಹೇಳಿದ್ದೆ. ಆದರೆ, ಅವರು ತನಿಖೆ ಮಾಡಿಸಲಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ಶುಕ್ರವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎರಡು ವರ್ಷಗಳ ಹಿಂದೆಯೇ ಶಿವಕುಮಾರ್ ಮೇಲೆ ಐಟಿ ದಾಳಿ ಮಾಡಲು ಯಡಿಯೂರಪ್ಪ ಪತ್ರ ಬರೆದಿದ್ದರು. ಯಡಿಯೂರಪ್ಪರನ್ನು ಕಾಪಾಡಲು ಹೋಗಿದ್ದರಿಂದ ಶಿವಕುಮಾರ್ಗೆ ಈ ದುಸ್ಥಿತಿ ಬಂದಿದೆ ಎಂದರು.
ರಾಜಕೀಯದಿಂದ ಬೇಸತ್ತಿದ್ದೇನೆ. ನನಗೆ ರಾಜಕೀಯದ ಅವಶ್ಯಕತೆ ಇಲ್ಲ. ಬಿಡದಿಯಲ್ಲಿ ಕೃಷಿ ಭೂಮಿ ಇದೆ, ಅದೇ ಸಾಕು. ನಾನು ಯಾವುದೇ ಅಕ್ರಮ ಮಾಡಿಲ್ಲ. ಯಾವ ಅಧಿಕಾರಿಗೂ ತೊಂದರೆ ಕೊಟ್ಟಿಲ್ಲ ಎಂದು ಕುಮಾರಸ್ವಾಮಿ ಹೇಳಿದರು.
ನಾನು ಮುಖ್ಯಮಂತ್ರಿ ಆದ ಸಂದರ್ಭದಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಆಸಕ್ತಿ ಕೊಟ್ಟಿದ್ದೇನೆ. ಆದರೆ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಉತ್ತಮ ಶಿಕ್ಷಣ ತೃಪ್ತಿ ತಂದಿಲ್ಲ. ಆದರೆ, ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಿದ್ದೇನೆ ಎಂದು ಅವರು ತಿಳಿಸಿದರು.
ಉದ್ಯೋಗ ಸೃಷ್ಟಿಸುವಲ್ಲಿ ಪ್ರಧಾನಿ ನರೇಂದ್ರ ಮೋದಿ ವಿಫಲರಾಗಿದ್ದಾರೆ. ಓದಿದ ಮಕ್ಕಳಿಗೆ ಉದ್ಯೋಗ ನೀಡುವಲ್ಲಿ ವಿಫಲರಾಗಿದ್ದಾರೆ. ಯುವ ಸಮೂಹ ಕೇವಲ ಭಾವನಾತ್ಮಕ ವಿಷಯಗಳಿಗೆ ಬಲಿಯಾಗಬಾರದು ಎಂದು ಕುಮಾರಸ್ವಾಮಿ ಮನವಿ ಮಾಡಿದರು.
ನಾನು ಮುಖ್ಯಮಂತ್ರಿ ಆಗಿದ್ದು ಕೆಲವರಿಗೆ ಸಹಿಸಲು ಆಗಲಿಲ್ಲ. ಮುಖ್ಯಮಂತ್ರಿ ಹುದ್ದೆ ಮುಳ್ಳಿನ ಹಾಸಿಗೆ ಆಗಿತ್ತು. ನಮ್ಮ ಸಮ್ಮಿಶ್ರ ಸರಕಾರ ತೆಗೆಯಲು ಇಲ್ಲಿನ ಭಗೀರಥ ಸಿ.ಪಿ.ಯೋಗೇಶ್ವರ್ ಮುಂದಾಳತ್ವ ವಹಿಸಿದ್ದರು. ನಾನು ಪಾಪದ ಹಣ ಸಂಪಾದನೆ ಮಾಡಿಲ್ಲ. ಒಂದು ವೇಳೆ ಪಾಪದ ಹಣ ಇದ್ದಿದ್ದರೆ ಶಾಸಕರನ್ನು ಹಿಡಿದಿಟ್ಟುಕೊಳ್ಳಬಹುದಿತ್ತು ಎಂದು ಕುಮಾರಸ್ವಾಮಿ ಹೇಳಿದರು.
ಈಡಿ, ಐಟಿಯವರು ಶಿವಕುಮಾರ್ಗೆ ನಿಮ್ಮ ಜಮೀನಿನಲ್ಲಿ ಬೆಳೆ ಬದಲು ಚಿನ್ನ ಬೆಳೆದಿದ್ದೀರಾ ಎಂದು ಪ್ರಶ್ನೆ ಮಾಡಿದ್ದಾರೆ. ಕಳೆದ 25 ವರ್ಷದಿಂದ ಅವರು ತೆರಿಗೆ ಕಟ್ಟುತ್ತಿದ್ದಾರೆ. ಅವತ್ತಿನಿಂದ ಈ ಬಗ್ಗೆ ಯಾಕೆ ಪ್ರಶ್ನೆ ಮಾಡಿಲ್ಲ. ಅವರೇ ಪ್ರೋತ್ಸಾಹ ಮಾಡುತ್ತಾರೆ, ಮತ್ತೆ ಅವರೇ ಹಿಂಸೆ ಕೊಡುತ್ತಾರೆ ಎಂದು ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.
ಪ್ರಧಾನಿ ಕರ್ನಾಟಕಕ್ಕೆ ಬರುತ್ತಾರೆ. ಆದರೆ, ನೆರೆ ಸಂತ್ರಸ್ತರಿಗೆ ಒಂದು ಬಿಡಿಗಾಸು ಕೊಡುವುದಿಲ್ಲ. ಯಡಿಯೂರಪ್ಪ ಭೇಟಿಗೂ ಮೋದಿ ಅವಕಾಶ ಕೊಡುತ್ತಿಲ್ಲ. ನಿಮ್ಮ ಭಗೀರಥ ಇದ್ದಾನಲ್ಲ, ಅಧಿಕಾರಿಗಳಿಗೆ ಹೆದರಿಸಿ ಸಂಪಾದನೆ ಮಾಡುತ್ತಿದ್ದಾನೆ. ದುಡ್ಡು ಕೊಟ್ಟಿಲ್ಲ ಅಂದರೆ ಬೇರೆ ಕಡೆ ವರ್ಗಾವಣೆ ಮಾಡಿಸುತ್ತಾನೆ ಎಂದು ಯೋಗೇಶ್ವರ್ ವಿರುದ್ಧ ಅವರು ಆರೋಪ ಮಾಡಿದರು.
ಹಿಂದಿನ ಕಾಂಗ್ರೆಸ್ ಸರಕಾರದಲ್ಲಿ ರಾಮನಗರ ತಹಶಿಲ್ದಾರ್ ಆಗಿದ್ದ ರಘುಮೂರ್ತಿ, ಭ್ರಷ್ಟಾಚಾರದಲ್ಲಿ ಜೈಲಿಗೆ ಹೋಗಿ ಬಂದಿದ್ದ. ಆದರೆ, ಈಗ ಆತನಿಗೆ ಯಲಹಂಕ ತಹಶಿಲ್ದಾರ್ ಆಗಿ ನೇಮಕ ಮಾಡಲಾಗಿದೆ. 1.75 ಕೋಟಿ ರೂ.ಕೊಟ್ಟು ಆತ ತಹಶಿಲ್ದಾರ್ ಆಗಿದ್ದಾನೆ ಎಂದು ಕುಮಾರಸ್ವಾಮಿ ದೂರಿದರು.
ಬಿಜೆಪಿ ಸರಕಾರದ ಆಯಸ್ಸು 3-4 ತಿಂಗಳು ಎಂಬ ಕೋಡಿಮಠದ ಸ್ವಾಮಿ ನೀಡಿರುವ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ನಾನು ಜ್ಯೋತಿಷಿ ಅಲ್ಲ. ಸರಕಾರದ ನಡುವಳಿಕೆಗಳನ್ನು ನೋಡಿದರೆ ಯಾವ ಸಮಯದಲ್ಲಿ ಬೇಕಾದರು ಬೀಳಬಹುದು. ಸಮಯ ಬರುತ್ತೆ ಕಾದುನೋಡಿ ಎಂದು ಕುಮಾರಸ್ವಾಮಿ ಹೇಳಿದರು.
ನಮಗೆ ಯಾರ ಮೇಲೂ ಸಿಟ್ಟು ಇಲ್ಲ. ಆದರೆ, ಎಲ್ಲ ವಿಚಾರಗಳಿಗೆ ನನ್ನ ಹೆಸರನ್ನ ಯಾಕೆ ತಳಕು ಹಾಕುತ್ತಾರೆ. ಮೈಸೂರಿನಲ್ಲಿ ಇವತ್ತಿನ ಸಭೆಗೆ ಜಿಲ್ಲೆಯ ಎಲ್ಲಾ ನಾಯಕರಿಗೂ ಆಹ್ವಾನ ನೀಡಲಾಗಿದೆ. ಜಿ.ಟಿ.ದೇವೇಗೌಡಗೂ ಆಹ್ವಾನ ನೀಡಲಾಗಿದೆ. ಬರುವವರು ಬರುತ್ತಾರೆ, ಬಾರದೆ ಇರುವವರು ಬರಲ್ಲ ಎಂದು ಅವರು ತಿಳಿಸಿದರು.
ಬಿಎಸ್ವೈ ಪತ್ನಿ ಸಾವು ಸಹಜವಲ್ಲ?: ಮುಖ್ಯಮಂತ್ರಿ ಯಡಿಯೂರಪ್ಪ ಪತ್ನಿ ಸಾವು ಸಹಜವಲ್ಲ, ಅನುಮಾನಾಸ್ಪದವಾಗಿದೆ. ಒಂದು ಅಡಿ ಇರುವ ನೀರಿನ ಸಂಪಿಗೆ ಬಿದ್ದು ಅವರು ಸಾವನ್ನಪ್ಪಿದ್ದರು. ಇದು ಅನುಮಾನಾಸ್ಪದ ಸಾವು ಅಲ್ಲವೇ? ಇದರ ಬಗ್ಗೆ ಯಾರು ಕೂಡ ಪ್ರಚಾರ ಮಾಡಲ್ಲ ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.
ಮಾಧ್ಯಮಗಳ ವಿರುದ್ಧ ಅಸಮಾಧಾನ
ಕುಮಾರಸ್ವಾಮಿ ಗ್ರಾಮ ವಾಸ್ತವ್ಯ ಮಾಡಿದರೆ ತಪ್ಪು. ಅದೇ ನಿಮ್ಮ ಸಚಿವರು ವಾಸ್ತವ್ಯ ಮಾಡಿದರೆ ಸರಿ? ಬೆಂಗಳೂರಿನಲ್ಲಿ ನಡೆದ ಡಿ.ಕೆ.ಶಿವಕುಮಾರ್ ಪರ ರ್ಯಾಲಿಯಲ್ಲಿ ಭಾಗವಹಿಸದ ವಿಚಾರದಲ್ಲಿ ನನ್ನನ್ನು ಖಳನಾಯಕನಂತೆ ಬಿಂಬಿಸಲಾಯಿತು. ಮಾಧ್ಯಮಗಳ ಮಾಲಕರನ್ನ ನಂಬಿ ನಾನು ಬದುಕುತ್ತಿಲ್ಲ.
-ಎಚ್.ಡಿ.ಕುಮಾರಸ್ವಾಮಿ, ಮಾಜಿ ಸಿಎಂ