"ಜಮಾಅತೆ ಅಹ್ಲೆ ಸುನ್ನತ್ ಸಂಘಟನೆ ಸಲ್ಲಿಸಿದ್ದ ರಿಟ್ ಅರ್ಜಿ ಸುಪ್ರೀಂಕೋರ್ಟ್ ಸ್ವೀಕರಿಸಿದೆ"
ಸಂಘಟನೆ ರಾಜ್ಯಾಧ್ಯಕ್ಷ ಮೌಲಾನಾ ತನ್ವೀರ ಪೀರಾ ಹಾಶ್ಮೀ
ವಿಜಯಪುರ, ಸೆ.20: ಕೇಂದ್ರ ಸರ್ಕಾರ ತ್ರಿವಳಿ ತಲಾಖ್ ನಿಷೇಧಕ್ಕೆ ಸಂಬಂಧಿಸಿದಂತೆ ಜಮಾಅತೆ ಅಹ್ಲೆ ಸುನ್ನತ್ ಕರ್ನಾಟಕ ಸಂಘಟನೆ ಸುಪ್ರೀಂಕೋರ್ಟ್ಗೆ ಸಲ್ಲಿಕೆ ಮಾಡಿದ್ದ ರಿಟ್ ಅರ್ಜಿಯನ್ನು ಸುಪ್ರೀಂಕೋರ್ಟ್ ಸ್ವೀಕರಿಸಿದ್ದು, ಸರ್ಕಾರಕ್ಕೆ ನೋಟಿಸ್ ರವಾನೆ ಮಾಡಿದೆ ಎಂದು ಅಹ್ಲೆ ಸುನ್ನತ್ ಕರ್ನಾಟಕ ಸಂಘಟನೆಯ ರಾಜ್ಯಾಧ್ಯಕ್ಷ ಮೌಲಾನಾ ತನ್ವೀರ ಪೀರಾ ಹಾಶ್ಮೀ ಮಾಹಿತಿ ನೀಡಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ತನ್ವೀರ ಪೀರಾ ಹಾಶ್ಮೀ ಅವರು, ಕೇಂದ್ರ ಸರ್ಕಾರ ರೂಪಿಸಿರುವ ತ್ರಿವಳಿ ತಲಾಖ್ ನಿಷೇಧ ಕಾನೂನು ಸ್ವೀಕಾರವಲ್ಲ. ಸಾಕಷ್ಟು ಲೋಪಗಳಿರುವ ಈ ಕಾನೂನು ಸಂಸತ್ತಿನಲ್ಲಿ ಗಂಭೀರವಾಗಿ ಚರ್ಚೆಯಾಗದೇ ಅಂಗೀಕರಿಸಲ್ಪಟ್ಟಿರುವುದು ಸರಿಯಲ್ಲ. ತ್ರಿವಳಿ ತಲಾಖ್ ನಿಷೇಧ ಕಾನೂನಿನಲ್ಲಿರುವ ಲೋಪಗಳನ್ನು ಸರಿಪಡಿಸುವಂತೆ ಕೋರಿ ನಮ್ಮ ಸಂಘಟನೆ ವತಿಯಿಂದ ಸುಪ್ರೀಂಕೋರ್ಟ್ನಲ್ಲಿ ರಿಟ್ ಅರ್ಜಿ ಸಲ್ಲಿಕೆ ಮಾಡಲಾಗಿತ್ತು. ನವದೆಹಲಿಯ ಹಿರಿಯ ನ್ಯಾಯವಾದಿ ಶಕೀಲ್ ಅಹ್ಮದ್ ವಾದ ಮಂಡಿಸುತ್ತಿದ್ದಾರೆ.
ಒಬ್ಬ ವ್ಯಕ್ತಿ ಏಕಕಾಲಕ್ಕೆ ಮೂರು ಬಾರಿ ತಲಾಖ್ ನೀಡಿದರೆ ಅದು ಕಾನೂನು ಬಾಹಿರವಾಗುತ್ತದೆ, 3 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗುತ್ತದೆ. ಆದರೆ ಮದುವೆ ರದ್ದಾಗುವುದಿಲ್ಲ ಎಂದು ಹೊಸ ಕಾನೂನು ಹೇಳುತ್ತದೆ. ಮದುವೆ ರದ್ದಾಗದಿದ್ದರೆ ಯಾವ ಕಾರಣಕ್ಕಾಗಿ ಶಿಕ್ಷೆ ವಿಧಿಸಲಾಗುತ್ತದೆ ಎಂಬುದು ಸ್ಪಷ್ಟವಿಲ್ಲ. ಒಂದು ವೇಳೆ ಆ ವ್ಯಕ್ತಿ ಜೈಲು ಪಾಲಾದರೆ ಅವರ ಅವಲಿಂಬಿತ ಕುಟುಂಬ ಸದಸ್ಯರ ಜವಾಬ್ದಾರಿಯನ್ನು ಯಾರು ಹೊರುತ್ತಾರೆ? ಹೀಗೆ ಅನೇಕ ರೀತಿಯ ದೋಷಗಳು ಇವೆ. ಇನ್ನೊಂದು ಉದಾರಹಣೆ ಅವಲೋಕಿಸಿದರೆ ಶಿಕ್ಷೆ ಅನುಭವಿಸಿ ಜೈಲಿನಿಂದ ಹೊರಬಂದ ವ್ಯಕ್ತಿ ತನ್ನ ಪತ್ನಿಯನ್ನು ಸ್ವೀಕರಿಸುತ್ತಾನೆಯೇ? ಈ ರೀತಿಯ ಕಾನೂನುಗಳಿಂದ ತಲಾಖ್ ವ್ಯವಸ್ಥೆಯನ್ನು ದುರ್ಬಳಕೆ ಮಾಡಿಕೊಳ್ಳುವುದರಿಂದ ಉಂಟಾಗುವ ಸಮಸ್ಯೆಗಳಿಗಿಂತ ಹೆಚ್ಚಿನ ಸಮಸ್ಯೆಗಳು ಉಂಟಾಗುವ ಸಾಧ್ಯತೆಗಳಿವೆ. ಈ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ಮೆಟ್ಟಿಲೇರಲಾಗಿದೆ ಎಂದು ತನ್ವೀರಪೀರಾ ಮಾಹಿತಿ ನೀಡಿದ್ದಾರೆ.