ಮಹಿಳೆಯ ಕೊಲೆ ಪ್ರಕರಣ: ಪತಿ ಸೇರಿ ಮೂವರ ಬಂಧನ
ಬಸವರಾಜ ನಾಯಕ್
ಮುಂಡಗೋಡ, ಸೆ.24: ಮಹಿಳೆಯೋರ್ವಳ ಕೊಲೆಗೈದ ಘಟನೆ ಸಂಬಂಧ ಆಕೆಯ ಪತಿ, ಮಾವ ಹಾಗೂ ಅತ್ತೆಯನ್ನು ಬಂಧಿಸಲಾಗಿದೆ.
ವರದಕ್ಷಿಣೆ ತರುವಂತೆ ಪೀಡಿಸಿ ರಾಯಚೂರು ಜಿಲ್ಲೆಯ ಮಸ್ಕಿಯಲ್ಲಿ ಮಹಿಳೆಯೋರ್ವಳನ್ನು ಕೊಲೆಗೈಯ್ಯಲಾಗಿತ್ತು ಎನ್ನಲಾಗಿದ್ದು, ಘಟನೆ ಸಂಬಂಧ ಮಹಿಳೆಯ ಪತಿ, ಮುಂಡಗೋಡ ತಾಲೂಕಿನ ಅರಣ್ಯ ರಕ್ಷಕ ಬಸವರಾಜ ನಾಯಕ್ ಹಾಗೂ ಆತನ ತಂದೆ ಮಾರುತಿ, ತಾಯಿ ಸುಲೋಚನಾ ರನ್ನು ಬಂಧಿಸಲಾಗಿದೆ.
ಕೊಲೆಯಾದ ಮಹಿಳೆಯನ್ನು ಭೋಜಪ್ಪ ನ ಮಗಳಾದ ತಾರಮ್ಮ(26)ಎಂದು ಗುರುತಿಸಲಾಗಿದೆ. ತಾರಮ್ಮ ಲಿಂಗಸೂರ ಸರ್ಕಾರಿ ಆಸ್ಪತ್ರೆಯಲ್ಲಿ 'ಡಿ' ಗ್ರೂಪ್ ನೌಕರಳಾಗಿ ಕೆಲಸ ಮಾಡುತ್ತಿದ್ದಳು ಎಂದು ಹೇಳಲಾಗಿದೆ.
ಒಂದೂವರೆ ವರ್ಷದ ಹಿಂದೆ ತಾರಮ್ಮ ಜೊತೆ ಬಸವರಾಜನಿಗೆ ಮದುವೆಯಾಗಿದ್ದು, ಮದುವೆ ವೇಳೆ 4 ತೊಲೆ ಚಿನ್ನ, 2.40 ಲಕ್ಷ ರೂ. ವರದಕ್ಷಿಣೆ ಪಡೆದಿದ್ದನು ಎನ್ನಲಾಗಿದೆ. ಆದರೆ ಬಸವರಾಜ ಮದುವೆ ನಂತರ ಇನ್ನಷ್ಟು ವರದಕ್ಷಿಣೆ ತರುವಂತೆ ತಾರಮ್ಮಳಿಗೆ ಪೀಡಿಸುತ್ತಿದ್ದ ಎನ್ನಲಾಗಿದೆ.
ಸೆ.20ರಂದು ರಾಯಚರು ಜಿಲ್ಲೆಯ ಮುದಗಲ್ಲ ಸಮೀಪದ ದೇಸಾಯಿ ಭೋಗಾಪುರ ತಾಂಡಾದಲ್ಲಿ ಬಸವರಾಜ ಹಾಗೂ ಆತನ ತಂದೆ-ತಾಯಿ ಜೊತೆ ಸೇರಿ ಹೆಂಡತಿ ತಾರಮ್ಮಳ ಕತ್ತು ಹಿಸುಕಿ ಕೊಲೆ ಮಾಡಿ ನಂತರ ಸೀಮೆ ಎಣ್ಣೆ ಹಾಕಿ ಸುಟ್ಟಿದ್ದರು ಎಂದು ಆರೋಪಿಸಲಾಗಿದೆ.
ಬಸವರಾಜನು ತನ್ನ ಹೆಂಡತಿ ತಾರಮ್ಮಳ ಕತ್ತು ಹಿಸುಕಿ ಕೊಲೆ ಮಾಡಿ ನಂತರ ಸೀಮೆ ಎಣ್ಣೆ ಹಾಕಿ ಸುಟ್ಟಿದ್ದಾರೆ ಎಂದು ತಾರಮ್ಮಳ ತಂದೆ ಭವೋಜಪ್ಪ ಮಸ್ಕಿ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದರು. ಅದರಂತೆ ಬಸವರಾಜ ನಾಯಕ್ ಹಾಗೂ ಆತನ ತಂದೆ ಮಾರುತಿ, ತಾಯಿ ಸುಲೋಚನಾ ರನ್ನು ಬಂಧಿಸಲಾಗಿದೆ.