ನೆರೆ ಸಂತ್ರಸ್ತರ ಬಗ್ಗೆ ಕೇಂದ್ರದ ಕಡೆಗಣನೆ ಖಂಡಿಸಿ ಸೆ.27ಕ್ಕೆ ರೈಲು ತಡೆದು ಪ್ರತಿಭಟನೆ: ಕುರುಬೂರು ಶಾಂತಕುಮಾರ್
ಮೈಸೂರು,ಸೆ.25: ರಾಜ್ಯದ ನೆರೆ ಸಂತ್ರಸ್ತರನ್ನು ಕಡೆಗಣಿಸುತ್ತಿರುವ ಕೇಂದ್ರ ಸರ್ಕಾರದ ವಿರುದ್ಧ ಇದೇ ಸೆ.27ರಂದು ರೈಲು ತಡೆದು ಪ್ರತಿಭಟನೆ ನಡೆಸಲಾಗುವುದು ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಹಾಗೂ ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರ್ ಶಾಂತಕುಮಾರ್ ತಿಳಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಬುಧವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಅವೈಜ್ಞಾನಿಕವಾದ ಎನ್.ಡಿಆರ್ ಎಫ್ ಮಾನದಂಡದಲ್ಲಿ ನೆರೆ ಸಂತ್ರಸ್ತ ರೈತರಿಗೆ ನೀಡುತ್ತಿರುವ ಪರಿಹಾರ ಭಿಕ್ಷಾ ರೂಪವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿ, ಈ ಕಾಯ್ದೆ ತಿದ್ದುಪಡಿಗೆ ರಾಜ್ಯದ ಸಂಸದರು ಕೇಂದ್ರ ಸರ್ಕಾರವನ್ನು ಒತ್ತಾಯಿಸಬೇಕು ಎಂದು ಆಗ್ರಹಿಸಿದರು.
ನೆರೆ, ಬರ, ಅತಿವೃಷ್ಠಿ ವೇಳೆಯಲ್ಲಿ ನಷ್ಟ ಪರಿಹಾರ ನೀಡುವ ಮಾನದಂಡಕ್ಕೆ ಬದಲಾಗಿ ಪ್ರಧಾನಿ ಫಸಲ್, ಭೀಮಾ ಬೆಳೆ ವಿಮೆ ಯೋಜನೆಯನ್ನು ತಿದ್ದುಪಡಿ ಮಾಡಿ ಎಲ್ಲಾ ಪ್ರದೇಶಕ್ಕೂ, ಎಲ್ಲಾ ಬೆಳೆಗಳಿಗೂ ಅನ್ವಯವಾಗುವಂತೆ ಬೆಳೆ ವಿಮೆ ಜಾರಿಗೆ ತರಬೇಕು ಎಂದರು.
ತಕ್ಷಣಕ್ಕೆ ಕಬ್ಬು ಖರೀದಿ ಮಂಡಳಿ ಸಭೆ ಕರೆದು ಕಬ್ಬಿನ ಉಪ ಉತ್ಪನ್ನಗಳ ಲಾಭ 2019-20 ನೇ ಸಾಲಿಗ ಹಂಚಿಕೆ ಮಾಡಿ ರೈತರಿಗೆ ಹೆಚ್ಚುವರಿ ಹಣ ಕೊಡಿಸಿ, ಅಲ್ಲದೇ ಸಕ್ಕರೆ ಹಾಗೂ ಕಬ್ಬು ಅಭಿವೃದ್ಧಿ ನಿಗಮಕ್ಕೆ ಖಾಯಂ ಆಯುಕ್ತರನ್ನು ನೇಮಿಸಬೇಕು ಎಂದು ಆಗ್ರಹಸಿದರು.
ಪತ್ರಿಕಾಗೋಷ್ಠಿಯಲ್ಲಿ ರೈತ ಮುಖಂಡರಾದ ಅತ್ತಹಳ್ಳಿ ದೇವರಾಜ್, ಸೋಮಶೇಖರ್, ಬಡನಪುರ ನಾಗರಾಜ್, ಪರಕೋಡು ಕೃಷ್ಣೇಗೌಡ ಸೇರಿದಂತೆ ಹಲವರು ಉಪಸ್ಥಿತರಿದ್ದರು.