ಮೂಲನಿವಾಸಿಗಳನ್ನು ಕೆಣಕಿದ ಪ್ರತಾಪ್ ಸಿಂಹನನ್ನು ಸುಮ್ಮನೆ ಬಿಡುವುದಿಲ್ಲ: ಪ್ರೊ.ಮಹೇಶ್ ಚಂದ್ರಗುರು ಎಚ್ಚರಿಕೆ
ಮೈಸೂರು,ಸೆ,27: ನಾವು ಮಹಿಷನ ವಂಶಸ್ಥರು, ನೀನು ಗುಲಾಮಗಿರಿಯ ಮಗ, ಹನುಮನ ಮಗ ಎಂದು ಪ್ರಗತಿಪರ ಚಿಂತಕ ಪ್ರೊ.ಬಿ.ಪಿ.ಮಹೇಶ್ ಚಂದ್ರಗುರು ಅವರು ಸಂಸದ ಪ್ರತಾಪ್ ಸಿಂಹ ವಿರುದ್ಧ ವಾಗ್ದಾಳಿ ನಡೆಸಿದರು.
ಮಹಿಷ ದಸರಾ ಆಚರಣೆಯಲ್ಲಿ ಮಾತನಾಡಿದ ಅವರು, 'ಮಹಿಷನಿಗೆ ಹುಟ್ಟಿರುವವರು ಅವರ ಮನೆಯಲ್ಲಿ ಮಹಿಷ ದಸರಾ ಆಚರಣೆ ಮಾಡಿಕೊಳ್ಳಲಿ' ಎಂಬ ಸಂಸದ ಪ್ರತಾಪ್ ಸಿಂಹನ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದರು. ನಾವು ಮಹಿಷನ ವಂಶಸ್ಥರು. ನಾವು ಸತ್ಯವನ್ನು ಹೇಳುತ್ತೇವೆ. ನಿಮ್ಮ ಹಾಗೆ ಮಿತ್ಯವನ್ನಲ್ಲ. ಮಹಿಷ ಈ ನಾಡಿನ ದೊರೆ. ಅವನ ಇತಿಹಾಸ ಗೊತ್ತಿಲ್ಲದ ನೀನು ನಮ್ಮ ಬಗ್ಗೆ ಮಾತನಾಡುತ್ತೀಯಾ. ನಾವು ಈ ನಾಡಿಗೆ ರಕ್ತವನ್ನು ಹರಿಸಿರುವವರು ಎಂದು ಹರಿಹಾಯ್ದರು.
ಮಹಿಷನ ಕೇಂದ್ರ ಸ್ಥಾನ ಮೈಸೂರು. ಇಲ್ಲಿ ನಮಗೆ ಇರುವ ಹಕ್ಕು ನಿನಗೆ ಇಲ್ಲ. ನೀನೊಬ್ಬ ರಾಜಕೀಯ ಭಯೋತ್ಪಾದಕ. ಮೂಲನಿವಾಸಿಗಳನ್ನು ಕೆಣಕಿದ ಮೇಲೆ ನಿನ್ನನ್ನು ಸುಮ್ಮನೆ ಬಿಡುವುದಿಲ್ಲ ಎಂದು ಎಚ್ಚರಿಸಿದರು.
ಈತ ಮಂಗಳೂರಿನಲ್ಲಿ ವಿದ್ಯಾಭ್ಯಾಸ ಮಾಡುವ ವೇಳೆ ಈತನ ತಂದೆ ಆ ಕಾಲೇಜಿಗೆ ಬಂದರೆ ಸ್ನೇಹಿತರಿಗೆ 'ಈತ ನಮ್ಮ ಮನೆ ಕೆಲಸದವನು' ಎಂದು ಹೇಳುತ್ತಿದ್ದ. ಒಂದು ಸಂದರ್ಭದಲ್ಲಿ ಈತನಿಗೆ ನಾನೇ ಬುದ್ಧಿ ಕಲಿಸಿದ್ದೀನಿ. ಈಗ ಮತ್ತೊಮ್ಮೆ ಈತನಿಗೆ ಸರಿಯಾಗಿಯೇ ಬುದ್ಧಿ ಕಲಿಸಬೇಕಿದೆ ಎಂದು ಹೇಳಿದರು.
ಇತಿಹಾಸ ಗೊತ್ತಿಲ್ಲದೆ ಮಾತನಾಡುವ ನೀನು ನಮ್ಮ ಬಳಿ ಬಂದು ಇತಿಹಾಸ ಕಲಿತುಕೊ. ನಿನ್ನ ಹಾಗೆ ಶಾಂತಿಯನ್ನು ಕೆಡಿಸುವವರಲ್ಲ. ನಮ್ಮ ಬೌದ್ಧ ಸಂಸ್ಕೃತಿಯವರು ಏಷ್ಯಾಖಂಡದ ಬಹುತೇಕ ರಾಷ್ಟ್ರಗಳಲ್ಲಿ ನೆಲೆಸಿ ನೆಮ್ಮದಿಯಾಗಿ ಬದುಕುತ್ತಿದ್ದಾರೆ ಎಂದು ಹೇಳಿದರು.