ಪೊಲೀಸರ ವಿರುದ್ಧ ಸಂಸದ ಪ್ರತಾಪ್ ಸಿಂಹ ಆಕ್ರೋಶ: ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್
ಮೈಸೂರು,ಸೆ.27: ಮಹಿಷ ದಸರಾ ವೇದಿಕೆ ತೆರವುಗೊಳಿಸುವಂತೆ ಸಂಸದ ಪ್ರತಾಪ್ ಸಿಂಹ ಪೊಲೀಸರೊಂದಿಗೆ ಅನುಚಿತವಾಗಿ ವರ್ತಿಸಿದ್ದಲ್ಲದೆ ಕೆಟ್ಟ ಪದ ಪ್ರಯೋಗ ಮಾಡಿ ದರ್ಪ ತೋರಿಸಿದ್ದಾರೆನ್ನಲಾದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ದಸರಾ ಹಿನ್ನಲೆಯಲ್ಲಿ ಗುರುವಾರ ಚಾಮುಂಡಿ ಬೆಟ್ಟಕ್ಕೆ ತೆರಳಿ ಪರಿಶೀಲನೆ ಮಾಡುವ ವೇಳೆ ಮಹಿಷ ದಸರಾ ವೇದಿಕೆ ಸಿದ್ದಗೊಳ್ಳುತ್ತಿರುವುದನ್ನು ಕಂಡ ಸಂಸದ ಪ್ರತಾಪ್ ಸಿಂಹ, ಕೆಂಡಮಂಡಲಾರಾಗಿ ಯಾರು ಇವರಿಗೆ ಅನುಮತಿ ನೀಡಿದ್ದು ಎಂದು ಪ್ರಶ್ನಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ಡಿಸಿಪಿ ಮುತ್ತುರಾಜ್ ಅವರನ್ನು ಕುರಿತು 'ಇಂತಹ ಶಂಡತನವನ್ನು ನಿಮ್ಮಿಂದ ನಿರೀಕ್ಷಿಸಿರಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಕ್ಷಣ ಅಲ್ಲಿಗೆ ಬಂದ ಪೊಲೀಸ್ ಕಮೀಷನರ್ ಪ್ರತಾಪ್ ಸಿಂಹ ವಿರುದ್ಧ ತಿರುಗಿಬಿದ್ದ ನಂತರ ಪ್ರತಾಪ್ ಸಿಂಹ ಸುಮ್ಮನಾದರು ಎನ್ನಲಾಗಿದೆ.
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದ್ದು, ಕರ್ತವ್ಯ ನಿರತ ಪೊಲೀಸರ ಮೇಲೆ ಸಂಸದ ಪ್ರತಾಪ್ ಸಿಂಹರ ಈ ನಡವಳಿಕೆ ಎಷ್ಟು ಸರಿ ಎಂಬ ಪ್ರಶ್ನೆಗಳು ಕೇಳಿಬರುತ್ತಿವೆ.