ಹನೂರು: ಬೈಕ್-ಟಾಟಾಏಸ್ ಮುಖಾಮುಖಿ ಢಿಕ್ಕಿ: ಸವಾರ ಸ್ಥಳದಲ್ಲೇ ಮೃತ್ಯು
ಹನೂರು, ಸೆ.28: ಬೈಕ್ ಮತ್ತು ಟಾಟಾಏಸ್ ನಡುವೆ ಮುಖಾಮುಖಿ ಢಿಕ್ಕಿ ಸಂಭವಿಸಿ ಬೈಕ್ ಸವಾರ ಸ್ಥಳದಲ್ಲಿ ಸಾವನ್ನಪ್ಪಿರುವ ಘಟನೆ ಹನೂರು ಸಮೀಪದ ಮಲೈಮಹದೇಶ್ವರ ಬೆಟ್ಟ ರಸ್ತೆಯಲ್ಲಿ ಶನಿವಾರ ನಡೆದಿದೆ.
ಚಾಮರಾಜನಗರ ಸಮೀಪದ ಕೂಡ್ಲೂರು ಗ್ರಾಮದ ನಿವಾಸಿಗಳಾದ ನಾಗೇಂದ್ರ ಹಾಗೂ ಸುರೇಶ್ ಅಪಘಾತಕ್ಕೆ ಒಳಗಾದವರಾಗಿದ್ದು, ಇವರಲ್ಲಿ ಸುರೇಶ್ ಎಂಬಾತ ಸ್ಥಳದಲ್ಲಿ ಮೃತಪಟ್ಟಿದ್ದಾನೆ. ನಾಗೇಂದ್ರನಿಗೆ ಗಂಭೀರ ಗಾಯಗಳಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಕೊಳ್ಳೇಗಾಲ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.
ಘಟನೆ ವಿವರ: ಮಲೈಮಹದೇಶ್ವರ ಬೆಟ್ಟಕ್ಕೆ ತೆರಳಿ ವಾಪಸ್ ಬರುವಾಗ ಹನೂರು ಸಮೀಪದ ತಿರುವಿನಲ್ಲಿ ಎದುರು ಬರುತ್ತಿದ್ದ ಟಾಟಾಏಸ್ ಗೆ ಬೈಕ್ ಮುಖಾಮುಖಿ ಢಿಕ್ಕಿ ಹೊಡೆದಿದೆ. ಟಾಟಾಏಸ್ ನಲ್ಲಿ ಮಂಡ್ಯ ಜಿಲ್ಲೆಯ ವಿವಿಧ ಕಡೆಗಳಿಂದ ಆಗಮಿಸಿದ್ದ ಮಹಿಳೆಯದ್ದರು. ಅದೃಷ್ಟವಶಾತ್ ಟಾಟ್ಏಸ್ನಲ್ಲಿದ್ದ ಯಾರಿಗೂ ಸಹ ಯಾವುದೇ ಅಪಾಯವಾಗಿಲ್ಲ ಎಂದು ತಿಳಿದು ಬಂದಿದೆ.
ತಿರುವುಗಳಲ್ಲಿನ ಅವ್ಯವಸ್ಥೆಯನ್ನು ಸರಿಪಡಿಸಿ: ಹನೂರು ತಾಲೂಕಿನ ವಿವಿಧೆಡೆಯ ಮುಖ್ಯರಸ್ತೆಗಳ ತಿರುವುಗಳಲ್ಲಿ ಹಲವು ಕಡೆ ಬೃಹತ್ ಆಕಾರದ ಮರದ ರೆಂಬೆ ಕೊಂಬೆಗಳು ರಸ್ತೆಗೆ ವಾಲಿರುವುದರಿಂದ ವಾಹನ ಸವಾರರಿಗೆ ಆಡಚಣೆಯಾಗುತ್ತಿದ್ದು, ಇದರಿಂದಾಗಿಯೇ ಆಗಾಗ ರಸ್ತೆ ಅಪಘಾತಗಳು ಸಂಭವಿಸುತ್ತಿವೆ. ಕೂಡಲೇ ಸಂಬಂಧ ಪಟ್ಟ ಅಧಿಕಾರಿಗಳು ಎಚ್ಚೆತ್ತು ಅವ್ಯವಸ್ಥೆಯನ್ನು ಸರಿಪಡಿಸಬೇಕಾಗಿ ಸಾರ್ವಜನಿಕರು ಆಗ್ರಹಿಸಿದ್ದಾರೆ.