ಸೆ.30ರಿಂದ ಶಿಕ್ಷಕರ ವರ್ಗಾವಣೆ ಪುನರಾರಂಭ
ಬೆಂಗಳೂರು, ಸೆ.28: ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಮುಂದುವರಿಸುವುದಕ್ಕೆ ಚುನಾವಣಾ ಆಯೋಗ ಲಿಖಿತ ಅನುಮತಿ ನೀಡಿದ್ದು, ಸೆ.30ರಿಂದ ಪರಿಷ್ಕೃತ ವೇಳಾಪಟ್ಟಿಯೊಂದಿಗೆ ವರ್ಗಾವಣೆ ಕೌನ್ಸೆಲಿಂಗ್ ಪುನರಾರಂಭಗೊಳ್ಳಲಿದೆ.
ಪರಿಷ್ಕೃತ ವೇಳಾಪಟ್ಟಿಯನ್ನು http://www.schooleducation.kar.nic.in ಇಲ್ಲಿ ಅಪ್ಲೋಡ್ ಮಾಡಲಿದ್ದು, ಇದನ್ನು ನೋಡಿಕೊಂಡು ಸೋಮವಾರದಿಂದ ಕೌನ್ಸೆಲಿಂಗ್ಗೆ ಹಾಜರಾಗಬೇಕು. ಪ್ರತಿ ದಿನ 300 ಮಂದಿಗೆ ಕೌನ್ಸೆಲಿಂಗ್ಗೆ ಅವಕಾಶ ನೀಡಲಾಗುತ್ತದೆ ಎಂದು ಶಿಕ್ಷಣ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ರಾಜ್ಯದಲ್ಲಿ ಈ ಬಾರಿ ಸುಮಾರು ಪ್ರಾಥಮಿಕ ಶಾಲೆಯ 13 ಸಾವಿರ ಮತ್ತು ಪ್ರೌಢಶಾಲೆಯ 3 ಸಾವಿರ ಸೇರಿದಂತೆ ಸುಮಾರು 16 ಸಾವಿರ ಶಿಕ್ಷಕರು ವರ್ಗಾವಣೆಗೊಳ್ಳುತ್ತಿದ್ದು, ಎರಡೂ ವಿಭಾಗಗಳ ಅಂತರ ಘಟಕ ವರ್ಗಾವಣೆ ಇದೀಗ ಪ್ರಗತಿಯಲ್ಲಿದೆ. ಈ ವಿಭಾಗದಲ್ಲಿ ಸುಮಾರು 11 ಸಾವಿರದಷ್ಟು ಶಿಕ್ಷಕರ ವರ್ಗಾವಣೆ ನಡೆಯಲಿಕ್ಕಿದೆ ಎಂದು ತಿಳಿದುಬಂದಿದೆ.
ಪ್ರತಿ ದಿನ 250ರಿಂದ 300 ಮಂದಿಗೆ ಮಾತ್ರ ಕೌನ್ಸೆಲಿಂಗ್ ನಡೆಸುವುದು ಸಾಧ್ಯವಾಗುತ್ತಿದೆ. ಹೀಗಾಗಿ, ಅಕ್ಟೋಬರ್ ಕೊನೆಯ ವಾರದವರೆಗೂ ಈ ಪ್ರಕ್ರಿಯೆ ಮುಂದುವರಿಯುವ ನಿರೀಕ್ಷೆ ಇದ್ದು, ಕೊನೆಯ ಹಂತದಲ್ಲಿ ಘಟಕದ ಹೊರಗೆ ಮತ್ತು ಪರಸ್ಪರ ವರ್ಗಾವಣೆಯಷ್ಟೇ ಇರುತ್ತದೆ ಎನ್ನಲಾಗಿದೆ.