ಇಂಗ್ಲಿಷ್ ಗೊತ್ತಿದ್ದ ಮಾತ್ರಕ್ಕೆ ಯಾರೂ ಅಂತರಾಷ್ಟ್ರೀಯ ಮಟ್ಟದ ನಾಯಕರಾಗುವುದಿಲ್ಲ
ಸಂಸದ ತೇಜಸ್ವಿ ಸೂರ್ಯ ವಿರುದ್ಧ ಬಿಜೆಪಿ ಶಾಸಕ ಯತ್ನಾಳ್ ಆಕ್ರೋಶ
ಬೆಂಗಳೂರು, ಅ.1: ಐಷಾರಾಮಿ ಹವಾನಿಯಂತ್ರಿತ ಕೊಠಡಿಗಳಲ್ಲಿ ಕೂತು ಪಕ್ಷವನ್ನು ಕಟ್ಟಲು ಸಾಧ್ಯವಿಲ್ಲ. ಹಳ್ಳಿ, ಹಳ್ಳಿಗಳಿಗೆ ಅಲೆದಾಡಿ ಪಕ್ಷವನ್ನು ಕಟ್ಟಿದ್ದು ನಾವು. ಇಂಗ್ಲಿಷ್ ಭಾಷೆ ಬಂದ ಮಾತ್ರಕ್ಕೆ ಯಾರೂ ಕೂಡ ಅಂತರ್ರಾಷ್ಟ್ರೀಯ ಮಟ್ಟದ ನಾಯಕರಾಗುವುದಿಲ್ಲ ಎಂದು ಸಂಸದ ತೇಜಸ್ವಿ ಸೂರ್ಯ ವಿರುದ್ಧ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಾಗ್ದಾಳಿ ನಡೆಸಿದರು.
ಮಂಗಳವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೆರೆ ಪರಿಹಾರಕ್ಕಾಗಿ ಕೇಂದ್ರದ ಸಹಾಯ ಅಗತ್ಯವಿಲ್ಲ ಎಂದು ಹೇಳಿಕೆ ನೀಡಿದ್ದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ವಿರುದ್ಧ ಮತ್ತೊಮ್ಮೆ ವಾಗ್ದಾಳಿ ನಡೆಸಿದರು.
ಈಗ ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ಕೆಲವರು ಮಾತನಾಡಲು ಆರಂಭಿಸಿದ್ದಾರೆ. ಗೂಟದ ಕಾರು ಇಟ್ಟುಕೊಂಡು ಓಡಾಡುವವರೇ ನಾಯಕರ ವಿರುದ್ಧ ಮಾತನಾಡಿದರೆ ಹೇಗೆ? ಸಚಿವ ಸ್ಥಾನದಲ್ಲಿ ಇರುವುದಾದರೂ ಏಕೆ, ರಾಜೀನಾಮೆ ಕೊಟ್ಟು ಹೊರಗೆ ಬರಲಿ. ಪಕ್ಷವನ್ನು ಕಟ್ಟಿರುವ ತುಂಬಾ ಜನ ಅಧಿಕಾರಕ್ಕಾಗಿ ಸರತಿ ಸಾಲಿನಲ್ಲಿ ನಿಂತಿದ್ದಾರೆ ಎಂದು ಅವರು ಪರೋಕ್ಷವಾಗಿ ಸಚಿವ ಕೆ.ಎಸ್.ಈಶ್ವರಪ್ಪ ವಿರುದ್ಧ ಕಿಡಿಗಾರಿದರು.