ವಿಜಯಪುರ: ಸರಕಾರಿ ಬಸ್ಸಿಗೆ ಆಟೋ ರಿಕ್ಷಾ ಢಿಕ್ಕಿ; ನಾಲ್ವರು ಮೃತ್ಯು
# ಪೊಲೀಸ್ ತಪಾಸಣೆ ತಪ್ಪಿಸಿಕೊಳ್ಳುವ ಸಂದರ್ಭ ಅಪಘಾತ, #ಉದ್ರಿಕ್ತರಿಂದ ಪೊಲೀಸ್ ವಾಹನಕ್ಕೆ ಬೆಂಕಿ
ವಿಜಯಪುರ, ಅ.1: ಪೊಲೀಸರು ತಪಾಸಣೆ ತಪ್ಪಿಸಿಕೊಳ್ಳುವ ಭರದಲ್ಲಿ ಆಟೋ ರಿಕ್ಷಾವೊಂದು ಸರಕಾರಿ ಬಸ್ಸಿಗೆ ಢಿಕ್ಕಿ ಹೊಡೆದ ಪರಿಣಾಮ ನಾಲ್ವರು ಸ್ಥಳದಲ್ಲೇ ಮೃತಪಟ್ಟ ಘಟನೆ ವಿಜಯಪುರ ಜಿಲ್ಲೆ ಕೊಲ್ಹಾರ ಪಟ್ಟಣದ ಬಳಿ ಬುಧವಾರ ಅಪರಾಹ್ನ 2 ಗಂಟೆ ಸುಮಾರಿಗೆ ನಡೆದಿದೆ. ಇದೇವೇಳೆ ಉದ್ರಿಕ್ತ ಗುಂಪು ಸ್ಥಳಕ್ಕಾಗಮಿಸಿದ ಪೊಲೀಸ್ ವಾಹನಕ್ಕೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದೆ.
ಆಟೋ ರಿಕ್ಷಾ ಮಿತಿಗಿಂತ ಅಧಿಕ ಪ್ರಯಾಣಿಕರನ್ನು ಹೇರಿಕೊಂಡು ಬರುತ್ತಿತ್ತೆನ್ನಲಾಗಿದೆ. ಈ ವೇಳೆ ಕೊಲ್ಹಾರ ಪಟ್ಟಣದಲ್ಲಿ ಪೊಲೀಸರು ಎದುರಾಗಿದ್ದಾರೆ. ಪೊಲೀಸ್ ತಪಾಸಣೆ, ದಂಡದಿಂದ ಪಾರಾಗುವ ಉದ್ದೇಶದಿಂದ ಅಲ್ಲಿಂದ ತಪ್ಪಿಸಿಕೊಳ್ಳುವ ಯತ್ನದಲ್ಲಿ ಎದುರಿನಿಂದ ಬರುತ್ತಿದ್ದ ಸರಕಾರಿ ಬಸ್ಸಿಗೆ ಆಟೋ ರಿಕ್ಷಾ ಢಿಕ್ಕಿ ಹೊಡೆದಿದೆ ಎಂದು ತಿಳಿದುಬಂದಿದೆ.
ಘಟನೆಯಲ್ಲಿ ನಾಲ್ವರು ಸ್ಥಳದಲ್ಲಿ ಕೊನೆಯುಸಿರೆಳೆದಿದ್ದಾರೆ. ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಭೀತಿ ಎದುರಾಗಿದೆ.
ಇದೇವೇಳೆ ಉದ್ರಿಕ್ತ ಗುಂಪೊಂದು ರಸ್ತೆಯಲ್ಲಿ ಟಯರ್ ಉರಿಸಿದ್ದಲ್ಲದೆ ಕೊಲ್ಹಾರ ಪೊಲೀಸ್ ಠಾಣೆಯ ಪಿಎಸ್ಸೈ ವಾಹನಕ್ಕ್ಕೂ ಬೆಂಕಿಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದರಿಂದ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.