ಸಾಲಬಾಧೆ ತಾಳಲಾರದೆ ರೈತ ಆತ್ಮಹತ್ಯೆ
ಪಾಂಡವಪುರ, ಅ.5: ಕಬ್ಬು ಬೆಳೆಗೆ ಮಾಡಿದ್ದ ಸಾಲದ ಬಾಧೆಯಿಂದ ರೈತರೊಬ್ಬರು ಜಮೀನಿನ ಬಳಿ ಮರವೊಂದಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಗಾಣದ ಹೊಸೂರು ಗ್ರಾಮದಲ್ಲಿ ನಡೆದಿದೆ.
ಗಿರೀಗೌಡರ ಪುತ್ರ ರಮೇಶ್(46) ಆತ್ಮಹತ್ಯೆ ಮಾಡಿಕೊಂಡವರು. ರಮೇಶ್ ಮೂರು ಎಕರೆ ಜಮೀನಿನಲ್ಲಿ ಕಬ್ಬು ಬೆಳೆಯಲು ಖಾಸಗಿ ಲೇವಾದೇವಿದಾರರಿಂದ 2 ಲಕ್ಷ ರೂ., ಬ್ಯಾಂಕಿನಿಂದ 1.5 ಲಕ್ಷ ರೂ., ಸಹಕಾರ ಸಂಘದಲ್ಲಿ 1 ಲಕ್ಷ ರೂ. ಸೇರಿದಂತೆ 4.5 ಲಕ್ಷ ರೂ.ಗಳವರೆಗೆ ಸಾಲ ಮಾಡಿದ್ದರು ಎನ್ನಲಾಗಿದೆ.
ಲೇವಾದೇವಿದಾರರಿಂದ ಸಾಲ ತೀರಿಸುವಂತೆ ತೀವ್ರ ಒತ್ತಡ ಹಾಗೂ ಬೆಳೆದು ನಿಂತ ಕಬ್ಬನ್ನು ಕಾರ್ಖಾನೆಗಳಿಗೆ ಸಾಗಣೆ ಮಾಡಲಿಲ್ಲ ಎಂಬ ಹಿನ್ನೆಲೆಯಲ್ಲಿ ಮನನೊಂದ ರೈತ ರಮೇಶ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಲಾಗಿದೆ.
ರಮೇಶ್ ಅವರಿಗೆ ಪತ್ನಿ ಸರಿತಾ ಹಾಗೂ ಇಬ್ಬರು ಗಂಡು ಮಕ್ಕಳಿದ್ದಾರೆ. ಘಟನಾ ಸ್ಥಳಕ್ಕೆ ತಹಸೀಲ್ದಾರ್ ಪ್ರಮೋದ್ ಪಾಟೀಲ್ ಸೇರಿದಂತೆ ಇತರೆ ಅಧಿಕಾರಿ ವರ್ಗ ಭೇಟಿ ನೀಡಿದ್ದರು.
ಪಾಂಡವಪುರ ಪೊಲೀಸರು ತನಿಖೆ ಕೈಗೊಂಡಿದ್ದಾರೆ.