ಶಿವರಾಮ ಹೆಬ್ಬಾರ ಬಿಟ್ಟು ಬೇರೆಯವರಿಗೆ ಟಿಕೆಟ್ ನೀಡಬಾರದು: ಮಾಜಿ ಶಾಸಕ ವಿ.ಎಸ್.ಪಾಟೀಲ್
ಮುಂಡಗೋಡ, ಅ.10: 'ನಾನು ನಿರೀಕ್ಷೆ ಮಾಡಿಯೇ ಇರಲಿಲ್ಲ. ಅಧಿಕಾರ ತಾನಾಗಿಯೇ ಹುಡುಕಿಕೊಂಡು ಬಂದಿದೆ. ಅಧಿಕಾರ ತಾನಾಗಿಯೇ ಬಂದರೆ ಅದಕ್ಕೆ ಹೆಚ್ಚು ಗೌರವ ಇರುತ್ತದೆ. ಪಕ್ಷವು ಪಕ್ಷ ನಿಷ್ಠೆಯನ್ನು ಗುರುತಿಸಿ ಜವಾಬ್ದಾರಿ ನೀಡಿದೆ. ಅದನ್ನು ನಿಷ್ಠೆಯಿಂದ ನಿಭಾಯಿಸುತ್ತೇನೆ' ಎಂದು ಮಾಜಿ ಶಾಸಕ, ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆ ನೂತನ ಅಧ್ಯಕ್ಷ ವಿ.ಎಸ್.ಪಾಟೀಲ್ ಹೇಳಿದರು
ರಾಜ್ಯ ಸರಕಾರ ವಿ.ಎಸ್.ಪಾಟೀಲ್ ಅವರನ್ನು ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆ ಅಧ್ಯಕ್ಷರನ್ನಾಗಿ ನೇಮಕ ಮಾಡಿ ಆದೇಶ ಹೋರಡಿಸಿದ ಹಿನ್ನಲೆಯಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ ಅವರು, ಅಧಿಕಾರ ಯಾವತ್ತೂ ಶಾಶ್ವತವಲ್ಲ. ನಾವು ಮಾಡಿದ ಕೆಲಸ ಮಾತ್ರ ಶಾಶ್ವತವಾಗಿ ಉಳಿಯುತ್ತದೆ ಎಂದರು.
ಪಕ್ಷ ತನಗೆ ಎಲ್ಲವನ್ನೂ ನೀಡಿದೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿದ ಶಿವರಾಮ ಹೆಬ್ಬಾರ ಅವರಿಗೆ ಉಪ ಚುನಾವಣೆಯಲ್ಲಿ ಪಕ್ಷ ಟಿಕೇಟ್ ನೀಡಿದರೆ ಬೆಂಬಲಿಸಿ ಗೆಲ್ಲಿಸುವುದು ತಮ್ಮ ಜವಾಬ್ದಾರಿಯಾಗಿದೆ. ಅವರನ್ನು ಹೊರತು ಪಡಿಸಿ ಬೇರೆ ಯಾರನ್ನಾದರೂ ಅಭ್ಯರ್ಥಿ ಮಾಡಿದರೆ ತಾನು ಕೂಡ ಟಿಕೆಟ್ ಅಕಾಂಕ್ಷಿ ಎಂದು ಹೇಳಿದರು.