ಅನುದಾನವಿಲ್ಲದೆ ರಾಜ್ಯದ ಸರಕಾರಿ ಆಸ್ಪತ್ರೆಗಳಲ್ಲಿ ಜೀವ ರಕ್ಷಕ ಔಷಧ ಕೊರತೆ ?
ಸಾಂದರ್ಭಿಕ ಚಿತ್ರ
ಬೆಂಗಳೂರು, ಅ.10: ರಾಜ್ಯ ಸರಕಾರದ ಅನುದಾನ ಕೊರತೆ ಹಿನ್ನೆಲೆ ಟೆಂಡರ್ ಪ್ರಕ್ರಿಯೆ ವಿಳಂಬ ಸೇರಿ ಇನ್ನಿತರ ಕಾರಣಗಳಿಂದ ಆರೋಗ್ಯ ಇಲಾಖೆ ಅಧೀನದ ಕರ್ನಾಟಕ ಸ್ಟೇಟ್ ಡ್ರಗ್ಸ್ ಲಾಜಿಸ್ಟಿಕ್ ಆ್ಯಂಡ್ ವೇರ್ಹೌಸಿಂಗ್ ಸೊಸೈಟಿಯಲ್ಲಿ (ಕೆಡಿಎಲ್ಡಬ್ಲ್ಯುಎಸ್) ಸಮರ್ಪಕವಾಗಿ ಔಷಧಗಳು ಸಂಗ್ರಹವಾಗಿಲ್ಲ. ಇದರಿಂದ ಬಡ ರೋಗಿಗಳು ಚಿಕಿತ್ಸೆ ಪಡೆಯುವ ಸರಕಾರಿ ಆಸ್ಪತ್ರೆಗಳಲ್ಲಿ ಜೀವ ರಕ್ಷಕ ಔಷಧಗಳು ಸಿಗದೆ ಪರದಾಡುವಂತಾಗಿದೆ ಎನ್ನುವ ಗಂಭೀರ ಆರೋಪ ಕೇಳಿಬಂದಿದೆ.
ನ್ಯುಮೋನಿಯಾ, ನಿದ್ರಾಹೀನತೆ, ರಕ್ತದೊತ್ತಡ, ಗರ್ಭಾಶಯ ರಕ್ತಸ್ರಾವ, ಶಿಲೀಂಧ್ರ, ಮೈಗ್ರೇನ್, ಸಕ್ಕರೆ ಕಾಯಿಲೆ, ಉಸಿರಾಟ, ಕ್ಯಾನ್ಸರ್, ಅಸ್ತಮಾ, ಹೃದಯಾಘಾತ, ಪೋಷಕಾಂಶ, ಶ್ವಾಸಕೋಶ ಸಂಬಂಧಿತ ರೋಗ, ವಿವಿಧ ಗಂಭೀರ ಕಾಯಿಲೆಗಳನ್ನು ನಿವಾರಿಸುವ ಔಷಧ, ಹಲವು ವಿಧದ ಮಾತ್ರೆ ಹಾಗೂ ಚುಚ್ಚುಮದ್ದು ಸಹಿತ 150ಕ್ಕೂ ಹೆಚ್ಚು ಔಷಧಗಳು ಈಗಾಗಲೇ ಖಾಲಿ ಆಗಿವೆ ಎಂದು ಹೇಳಲಾಗುತ್ತಿದೆ. ಆರೋಗ್ಯ ಇಲಾಖೆಯ ಅಧೀನದ ಭಾಗವಾಗಿರುವ ಕೆಡಿಎಲ್ಡಬ್ಲ್ಯುಎಸ್ ಔಷಧಗಳನ್ನು ಸಂಗ್ರಹಿಸಿ 23 ಜಿಲ್ಲಾ, 161 ತಾಲೂಕು ಆಸ್ಪತ್ರೆ, 203 ಸಮುದಾಯ, ಆರೋಗ್ಯ ಕೇಂದ್ರ, 2,331 ಪ್ರಾಥಮಿಕ ಆರೋಗ್ಯ ಕೇಂದ್ರ, 179 ನಗರ ಆರೋಗ್ಯ ಕೇಂದ್ರ ಸೇರಿ 3 ಸಾವಿರಕ್ಕೂ ಹೆಚ್ಚು ಸರಕಾರಿ ಆಸ್ಪತ್ರೆಗಳಲ್ಲಿ ಸಕಾಲದಲ್ಲಿ ಔಷಧ ಪೂರೈಕೆ ಮಾಡುತ್ತಿದೆ.
ಔಷಧ ಪೂರೈಕೆಗಾಗಿಯೇ ಪ್ರತಿ ವರ್ಷ ನೂರಾರು ಕೋಟಿ ರೂ.ಟೆಂಡರ್ ಪ್ರಕ್ರಿಯೆ ನಡೆಯುತ್ತದೆ. ಆದರೆ, ಈ ಬಾರಿ ಅನುದಾನ ಕೊರತೆಯಿಂದ ಕೆಲ ಗಂಭೀರ ಕಾಯಿಲೆಗಳ ಔಷಧ ಟೆಂಡರ್ ಕರೆದಿಲ್ಲ ಎನ್ನಲಾಗಿದೆ. ಕಳೆದ ವರ್ಷ ಸರಕಾರ ನೀಡಿದ್ದ ಅನುದಾನದಲ್ಲಿ ಉಳಿದ ಹಣದಲ್ಲಿ ಈ ಬಾರಿ ಅಂದಾಜು 40 ವಿವಿಧ ಔಷಧಗಳ ಪೂರೈಕೆಗಾಗಿ ಟೆಂಡರ್ ಕರೆದು ಸ್ವಲ್ಪದಿನ ಆಗುವಷ್ಟು ಔಷಧಗಳನ್ನು ಸಂಗ್ರಹಿಸಲಾಗಿದೆ. ಆದರೆ, ಕೆಲ ಗಂಭೀರ ಕಾಯಿಲೆಗಳ ಸಂಬಂಧ ಟೆಂಡರ್ ಪ್ರಕ್ರಿಯೆಗಳು ನಡೆದಿಲ್ಲ. ಇದರಿಂದ ಮುಂಬರುವ ದಿನಗಳಲ್ಲಿ ಜೀವ ರಕ್ಷಕ ಔಷಧಗಳ ಕೊರತೆ ಎದುರಾಗುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.
ಹಿಂದೇಟು: ಕೆಟಿಟಿಪಿ ಕಾಯ್ದೆಯಲ್ಲಿ ಔಷಧ ಪೂರೈಕೆದಾರರಿಗೆ 40 ದಿನದಲ್ಲಿ ಹಣ ಪಾವತಿ ಮಾಡಬೇಕೆಂಬ ನಿಯಮ ಇದ್ದರೂ, ಸಂಸ್ಥೆಯ ಕೆಲವು ಅಧಿಕಾರಿಗಳು ಕಮಿಷನ್ಗಾಗಿ ಗುತ್ತಿಗೆದಾರರಿಗೆ ಹಣ ಬಿಡುಗಡೆ ಮಾಡುತ್ತಿಲ್ಲ. ಹೀಗಾಗಿ, ಕೋಟ್ಯಂತರ ರೂಪಾಯಿ ಬಿಲ್ ಬಾಕಿ ಉಳಿದಿದೆ. ನೆರೆಯ ತಮಿಳುನಾಡಲ್ಲಿ 30 ದಿನದೊಳಗೆ ಸರಬರಾಜುದಾರರಿಗೆ ಹಣ ಬಿಡುಗಡೆಯಾಗುತ್ತಿದೆ. ಆದರೆ, ವರ್ಷವಾದರೂ ಹಣ ಬರುವುದಿಲ್ಲ. ಇದರಿಂದ ಟೆಂಡರ್ನಲ್ಲಿ ಪಾಲ್ಗೊಳ್ಳಲು ಗುತ್ತಿಗೆದಾರರು ಹಿಂದೇಟು ಆಗುತ್ತಿದ್ದಾರೆ ಎನ್ನುವ ಮಾತುಗಳು ಕೇಳಿಬಂದಿವೆ.
ಬೇಡಿಕೆ ಹೆಚ್ಚು: 2017ರಲ್ಲಿ 337 ಕೋಟಿ ರೂ.ಹಾಗೂ 2018ರಲ್ಲಿ 360 ಕೋಟಿ ರೂ.ಮೊತ್ತ ಔಷಧಗಳನ್ನು ಸಂಗ್ರಹಿಸಿ ಸರಕಾರಿ ಆಸ್ಪತ್ರೆಗಳಲ್ಲಿ ಔಷಧ ಪೂರೈಸಿದ್ದವು. ಆದರೆ, ಈ ವರ್ಷದಿಂದ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳ ಸಂಖ್ಯೆ ಹೆಚ್ಚಳ ಹಾಗೂ ರಾಜ್ಯದ ಎಲ್ಲ ಆಸ್ಪತ್ರೆಗಳಿಂದ ಹೆಚ್ಚಿನ ಬೇಡಿಕೆ ಬಂದಿರುವ ಹಿನ್ನೆಲೆಯಲ್ಲಿ ಈ ಬಾರಿ 487.75 ಕೋಟಿ ರೂ. ಮೊತ್ತದ ಔಷಧಗಳಿಗೆ ಬೇಡಿಕೆ ಬಂದಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
‘ಬಡವರಿಗೆ ಕಷ್ಟ’
ಗಂಭೀರ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳು ಚಿಕಿತ್ಸೆಗಾಗಿ ಸರಕಾರಿ ಆಸ್ಪತ್ರೆಗಳಿಗೆ ತೆರಳಿದರೆ ಕೆಲ ಔಷಧಗಳು ಸಿಗುತ್ತಿಲ್ಲ. ಅನಿವಾರ್ಯವಾಗಿ ಹೆಚ್ಚಿನ ಹಣ ಕೊಟ್ಟು ಮೆಡಿಕಲ್ ಸ್ಟೋರ್ಗಳಲ್ಲಿ ಖರೀದಿಸುವಂತಾಗಿದೆ. ಇದನ್ನೇ ನೆಪ ಮಾಡಿಕೊಂಡಿರುವ ಖಾಸಗಿ ಆಸ್ಪತ್ರೆಗಳು ಬಡ ರೋಗಿಗಳ ಸುಲಿಗೆಗೆ ಇಳಿದಿವೆ ಎಂದು ರೋಗಿಗಳ ಸಂಬಂಧಿಕರು ದೂರುತ್ತಿದ್ದಾರೆ.