ಪರಮೇಶ್ವರ್, ಜಾಲಪ್ಪ ಮನೆ, ಶಿಕ್ಷಣ ಸಂಸ್ಥೆಗಳ ಮೇಲೆ ಐಟಿ ದಾಳಿ ಪ್ರಕರಣ: ತಪಾಸಣೆ ಮುಕ್ತಾಯ ?
ಬೆಂಗಳೂರು, ಅ.12: ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಮಾಜಿ ಸಚಿವ ಆರ್.ಎಲ್.ಜಾಲಪ್ಪ ಒಡೆತನದ ಮನೆ, ಶಿಕ್ಷಣ ಸಂಸ್ಥೆಗಳ ಮೇಲೆ ದಾಳಿ ನಡೆಸಿದ ಆದಾಯ ತೆರಿಗೆ(ಐಟಿ) ಅಧಿಕಾರಿಗಳ ತಪಾಸಣೆ ಕಾರ್ಯ ಮುಕ್ತಾಯವಾಗಿದೆ ಎಂದು ತಿಳಿದುಬಂದಿದೆ.
ಅ.10ರಂದು ಪರಮೇಶ್ವರ್ ಅವರ ಸದಾಶಿವನಗರ ನಿವಾಸ, ತುಮಕೂರಿನಲ್ಲಿರುವ ಸಿದ್ದಾರ್ಥ ಶಿಕ್ಷಣ ಸಂಸ್ಥೆಗಳ ಮೇಲೆ ಹಾಗೂ ಆರ್.ಎಲ್.ಜಾಲಪ್ಪಅವರ ಸೋದರಳಿಯ ಜಿ.ಎಚ್.ನಾಗರಾಜ್ ಅವರ ಮನೆಯಲ್ಲಿ ಕೈಗೊಂಡಿದ್ದ ತಪಾಸಣೆ ಕಾರ್ಯ ಶನಿವಾರ ಮಧ್ಯಾಹ್ನ ಮುಕ್ತಾಯವಾಗಿದೆ.
ವಿವಿಧ ಸ್ಥಳಗಳಲ್ಲಿ ದಾಳಿ ನಡೆಸಿ, ಹಣಕಾಸು ವ್ಯವಹಾರ, ಆಸ್ತಿಗಳು, ಆದಾಯ, ತೆರಿಗೆ ಪಾವತಿಗೆ ಸಂಬಂಧಿಸಿದ ದಾಖಲೆಗಳನ್ನು ಕಲೆ ಹಾಕುವ ಕಾರ್ಯ ಸುಮಾರು 54 ತಾಸುಗಳ ಬಳಿಕ ಮುಕ್ತಾಯವಾಯಿತು ಎನ್ನಲಾಗಿದೆ.
ಆತ್ಮಹತ್ಯೆ ಕಾರಣ: ಪರಮೇಶ್ವರ್ ಅವರ ಆಪ್ತ ಸಹಾಯಕ ರಮೇಶ್ ಆತ್ಮಹತ್ಯೆ ಬೆಳಕಿಗೆ ಬಂದ ಬೆನ್ನಲ್ಲೇ, ತುಮಕೂರು ಸೇರಿದಂತೆ ನಾನಾ ಕಡೆ ಶೋಧ ಕಾರ್ಯ ನಡೆಸುತ್ತಿದ್ದ ಐಟಿ ಅಧಿಕಾರಿಗಳು, ಅರ್ಧಕ್ಕೆ ಮುಟುಕುಗೊಳಿಸಿ, ವಾಪಸ್ಸು ಆಗಿದ್ದಾರೆ ಎಂದು ಹೇಳಲಾಗುತ್ತಿದೆ.
ಅದೇ ರೀತಿ, ಹಲವರಿಗೆ ಅಧಿಕಾರಿಗಳು, ವರದಿ ಕೊಟ್ಟು ಹೋಗಿದ್ದು, ಅ.15 ರಂದು ಬೆಂಗಳೂರಿನ ಪ್ರಧಾನ ಕಚೇರಿಗೆ ವಿಚಾರಣೆಗೆ ಹಾಜರಾಗುವಂತೆ ತಿಳಿಸಿದ್ದಾರೆ ಎನ್ನಲಾಗಿದೆ.