ಮೃತ ರಮೇಶ್ಗೂ ನಮ್ಮ ವ್ಯವಹಾರಕ್ಕೂ ಸಂಬಂಧವಿಲ್ಲ: ಮಾಜಿ ಡಿಸಿಎಂ ಪರಮೇಶ್ವರ್
ಬೆಂಗಳೂರು, ಅ. 13: ಸಿದ್ಧಾರ್ಥ ವೈದ್ಯಕೀಯ ಕಾಲೇಜಿನ ವ್ಯವಹಾರಕ್ಕೂ, ಮೃತ ರಮೇಶ್ಗೂ ಯಾವುದೇ ಸಂಬಂಧವಿಲ್ಲ ಎಂದು ಮಾಜಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಇಂದಿಲ್ಲಿ ಸ್ಪಷ್ಟನೆ ನೀಡಿದ್ದಾರೆ.
ರವಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ರಮೇಶ್ ನನ್ನ ಆಪ್ತ ಸಹಾಯಕರಾಗಿದ್ದರು. ಆದರೆ, ಅವರು ನಮ್ಮ ವ್ಯವಹಾರಗಳನ್ನು ನೋಡಿಕೊಳ್ಳುತ್ತಿದ್ದರು ಎಂಬುದು ಸತ್ಯಕ್ಕೆ ದೂರವಾದ ವಿಷಯ ಎಂದು ಇದೇ ವೇಳೆ ತಿಳಿಸಿದರು.
ನನ್ನ ಆಪ್ತ ಸಹಾಯಕನಾಗಿ ರಮೇಶ್ ಕೆಲಸ ಮಾಡುತ್ತಿದ್ದರು. ಒಬ್ಬ ಆಪ್ತ ಸಹಾಯಕ ನಮ್ಮ ವ್ಯವಹಾರಗಳನ್ನು ನೋಡಿಕೊಳ್ಳಲು ಸಾಧ್ಯವೇ? ಎಂದು ಪ್ರಶ್ನಿಸಿದ ಅವರು, ರಮೇಶ್ ಸಾವಿನಿಂದ ನನಗೆ ಅತೀವ ನೋವಾಗಿದೆ. ಅವರು ತಮ್ಮ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದರು. ಅಷ್ಟೇ ಅಲ್ಲದೆ ಅವರು ಪ್ರಾಮಾಣಿಕರಾಗಿದ್ದರು. ಕೆಲ ಸುದ್ಧಿ ವಾಹಿನಿಗಳಲ್ಲಿ ರಮೇಶ್ ಅವರೇ ನಮ್ಮ ವ್ಯವಹಾರಗಳನ್ನೆಲ್ಲ ನೋಡಿಕೊಳ್ಳುತ್ತಿದ್ದರು ಎಂದು ಬಿಂಬಿಸುತ್ತಿರುವುದು ಸರಿಯಲ್ಲ. ಅವರಿಗೂ ನಮ್ಮ ವ್ಯವಹಾರಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಪರಮೇಶ್ವರ್ ತಿಳಿಸಿದರು.