ಪ್ರತಾಪ್ ಸಿಂಹ ರಾಜ್ಯದ ಚಿಲ್ಲರೆ, ಅವಿವೇಕಿ ರಾಜಕಾರಣಿ: ಪ್ರೊ.ಮಹೇಶ್ ಚಂದ್ರಗುರು
ಮೈಸೂರು,ಅ.15: ಮಹಿಷ ದಸರಾಗೆ ಅಡ್ಡಿಪಡಿಸಿದ ಕರ್ನಾಟಕದ ಅತ್ಯಂತ ಚಿಲ್ಲರೆ, ಅವಿವೇಕಿ ರಾಜಕಾರಣಿ ಸಂಸದ ಪ್ರತಾಪ್ ಸಿಂಹ ಎಂದು ಪ್ರಗತಿಪರ ಚಿಂತಕ ಪ್ರೊ.ಬಿ.ಪಿ.ಮಹೇಶ್ ಚಂದ್ರಗುರು ಹೇಳಿದರು.
ನಗರದ ಕಲಾಮಂದಿರದಲ್ಲಿ ಸೋಮವಾರ ಬೌದ್ಧ ದಮ್ಮ ಧೀಕ್ಷಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಅತ್ಯಂತ ಕೆಟ್ಟ ಚಿಲ್ಲರೆ ರಾಜಕಾರಣಿ ಪ್ರತಾಪ್ ಸಿಂಹ. ಇಂತಹ ಅಯೋಗ್ಯನನ್ನು ಸಂಸತ್ನಲ್ಲಿ ಕೂರಿಸಿರುವುದು ನಮ್ಮ ದುರ್ದೈವ ಎಂದು ತಿಳಿಸಿದರು.
ಇತಿಹಾಸದ ಪ್ರಜ್ಞೆ ಇಲ್ಲದ ಒಬ್ಬ ಸಂಸದ ಭಾರತದ ಮೂಲ ನಿವಾಸಿಗಳ ಹಬ್ಬ ಮಹಿಷ ದಸರಾ ಆಚರಣೆಯನ್ನು ತಡೆಯುತ್ತಾನೆ. ಅದರ ಪರಿಣಾಮ ರಾಜ್ಯದ ಬಹುತೇಕ ಎಲ್ಲಾ ಜಿಲ್ಲೆಗಳಲ್ಲೂ ಮಹಿಷ ದಸರಾ ಆಚರಣೆ ನಡೆಯಿತು. ಈತ ನಮ್ಮನ್ನು ಮಹಿಷನಿಗೆ ಹುಟ್ಟಿದವರು ಎನ್ನುತ್ತಾನೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಗುಲಾಮಗಿರಿ ಮಾಡಿಕೊಂಡು ಚಮಚಾ ತರಹ ಬದುಕುತ್ತಿರುವ ಈತ ನಮಗೆ ಸಂಸ್ಕಾರದ ಪಾಠ ಹೇಳುತ್ತಾನೆ. ಸ್ವಾಭಿಮಾನದ ಮಹಿಷ, ಅಂಬೇಡ್ಕರ್, ಬೌದ್ಧ, ಬಸವ ಹಬ್ಬ ಆಚರಣೆ ಮಾಡುವ ನಮ್ಮನ್ನು ವಿರೋಧಿಸಿ ಹನುಮ ಜಯಂತಿ ಆಚರಿಸುತ್ತಾನೆ ಎಂದು ಲೇವಡಿ ಮಾಡಿದರು.
ಬಿಜೆಪಿಯವರು ಹನುಮನ ಜಯಂತಿ ಆಚರಣೆ ಸೃಷ್ಟಿ ಮಾಡಿರುವುದೇ ಗುಲಾಮರ ಹೊಸ ಪಡೆ, ಚಮಚಾಗಳನ್ನು ಸೃಷ್ಟಿ ಮಾಡಲು ಎಂದು ಹೇಳಿದರು.