ಕೊಡಗಿನ ಬೆಳೆಗಾರರ ಕೈ ಕಚ್ಚಿದ ಕಪ್ಪು ಬಂಗಾರ: ಆರ್ಥಿಕ ಕುಸಿತದ ಮೇಲೆ ಮತ್ತೊಂದು ಬರೆ
ಮಡಿಕೇರಿ ಅ.17 : ಕಪ್ಪು ಬಂಗಾರವಾಗಿ ಕೊಡಗಿನ ಸಣ್ಣ ಬೆಳೆಗಾರರ ಕೈಹಿಡಿಯುತ್ತಿದ್ದ ‘ಕಾಳು ಮೆಣಸು’ ಧಾರಣೆ ಇದೀಗ ಮೇಲೇಳದೆ ಇರುವುದು ಜಿಲ್ಲೆಯ ಕುಸಿದ ಆರ್ಥಿಕ ಪರಿಸ್ಥಿತಿಯ ಮೇಲೆ ಮತ್ತೊಂದು ಬರೆ ಎಳೆದಂತ್ತಾಗಿದೆ.
ಕಾಫಿಯ ನಾಡಾಗಿ ಪ್ರಸಿದ್ಧವಾಗಿರುವ ಕೊಡಗು ಬಹುತೇಕ 10 ಎಕರೆಗೆ ಒಳಪಟ್ಟ ಸಣ್ಣ ಕಾಫಿ ಬೆಳೆಗಾರರನ್ನು ಹೊಂದಿದ್ದು, ಇವರೆಲ್ಲರ ಕಾಫಿ ತೋಟಗಳಲ್ಲಿ ಹೆಚ್ಚಾಗಿ ಮಿಶ್ರ ಬೆಳೆಯಾಗಿ ಕಾಳುಮೆಣಸನ್ನು ಸಾಂಪ್ರದಾಯಿಕ ಕೃಷಿಯೆಂಬಂತೆ ನಡೆಸಿಕೊಂಡು ಬರಲಾಗುತ್ತಿದೆ. ಬೆಳೆಗಾರರ ಈ ಕಾಳಜಿಯಂತೆಯೇ ಕರಿಮೆಣಸು ಕೃಷಿ ಆರ್ಥಿಕವಾಗಿ ಬೆಳೆಗಾರರ ಕೈಹಿಡಿದುಕೊಂಡು ಬಂದಿತ್ತು.
ಅತ್ಯುತ್ಕೃಷ್ಟವಾದ ಕೊಡಗಿನ ಕರಿಮೆಣಸಿನ ಧಾರಣೆ ಎರಡು ವರ್ಷಗಳ ಹಿಂದೆ 700 ರೂ.ಗಳನ್ನು ಮೀರಿ ಮುನ್ನುಗ್ಗುವ ಹಂತದಲ್ಲಿತ್ತೊ, ಆ ಸಂದರ್ಭ ಜಿಲ್ಲೆಯ ಬೆಳೆಗಾರನ ಎಲ್ಲಾ ನಿರೀಕ್ಷೆಗಳನ್ನು ಮಣ್ಣು ಮಾಡಿದ್ದು ಕಳಪೆ ಗುಣಮಟ್ಟದ ‘ಗ್ವಾಟೆಮಾಲ’ದ ಕರಿಮೆಣಸಿನ ಆಮದು. ಗೋಣಿಕೊಪ್ಪಲಿನ ಎಪಿಎಂಸಿ ಮಳಿಗೆಯೊಂದರಲ್ಲಿ ಕಂಡು ಬಂದ ಆಮದು ಮಾಡಿಕೊಂಡ ಕಳಪೆ ಕರಿಮೆಣಸು ಒಂದು ಪ್ರಕರಣವಷ್ಟೆ, ಆದರೆ ಪ್ರಸ್ತುತ ಆಮದು ಪ್ರಕ್ರಿಯೆಗೆ ಅಂತ್ಯ ಕಾಣಿಸಲು ಸಾಧ್ಯವಾಗಿಲ್ಲ.
ಜಿಲ್ಲೆಯ ಗುಣಮಟ್ಟದ ಕರಿಮೆಣಸಿಗೆ ಬದಲಾಗಿ ಅತ್ಯಂತ ಕಡಿಮೆ ದರದ ಕರಿಮೆಣಸನ್ನು ಆಮದು ಮಾಡಿಕೊಳ್ಳುವುದಕ್ಕೆ ಕಡಿವಾಣ ಹಾಕಿ, ಸ್ಥಳೀಯ ಕರಿಮೆಣಸಿಗೆ ಉತ್ತಮ ಧಾರಣೆ ದೊರಕುವಂತೆ ಮಾಡಬೇಕೆನ್ನುವ ಬೆಳೆಗಾರರ ಕೂಗು ಅರಣ್ಯ ರೋದನವಾಯಿತೇ ಹೊರತು ಮತ್ತೇನು ಅಲ್ಲ. ಆ ಹಂತದಲ್ಲಿ ಸಮಸ್ಯೆಯನ್ನು ತಮ್ಮ ಹೆಗಲಿಗೆ ಹಾಕುವಂತೆ ಹೇಳಿ ಹೋದ ಸಂಸದರು ಮತ್ತೆ ಈ ವಿಷಯದತ್ತ ತಿರುಗಿ ನೋಡಿದ್ದಾರೆಯೇ ಎನ್ನುವ ಬಗ್ಗೆ ಯಾರಲ್ಲೂ ಉತ್ತರವಿಲ್ಲ.
ಕರಿಮೆಣಸಿನ ಧಾರಣೆಯನ್ನು ಸ್ಥಿರ ಗೊಳಿಸಬೇಕು, ಕನಿಷ್ಠ ಪ್ರತಿ ಕೆ.ಜಿ. ಕರಿಮೆಣಸಿಗೆ ಧಾರಣೆ ಕುಸಿತದ ಹಂತದಲ್ಲಿ 500 ರೂ. ಬೆಂಬಲ ಬೆಲೆ ದೊರಕಬೇಕೆನ್ನುವ ಬೆಳೆಗಾರ ಸಂಘಟನೆಗಳ ಬೇಡಿಕೆಗಳಿಗೆ ಕಿಮ್ಮಡಿ ಕಾಸಿನ ಬೆಲೆಯೂ ದೊರೆತಿಲ್ಲ. ಇದೆಲ್ಲದರ ಪರಿಣಾಮವೆಂದರೆ ಪ್ರಸ್ತುತ ಪ್ರತಿ ಕೆ.ಜಿ. ಕರಿಮೆಣಸಿನ ಧಾರಣೆ ಕೇವಲ 300 ರೂ. ಅದೂ ಗುಣಮಟ್ಟದ್ದಕ್ಕೆ ಮಾತ್ರ. ಗುಣಮಟ್ಟದಲ್ಲಿ ಒಂದಷ್ಟು ವ್ಯತ್ಯಾಸ ಉಂಟು ಎಂದಾದರೆ ಇದರ ಧಾರಣೆ 200 ರಿಂದ 250 ರೂ.ಗಳ ನಡುವೆ ತೂಗಾಡುತ್ತಿದೆ. ಕಳೆದೊಂದು ವರ್ಷದಿಂದಲೂ ಇದೇ ಪರಿಸ್ಥಿತಿ.
ಆತಂಕದಲ್ಲಿ ಬೆಳೆಗಾರ
ಕಷ್ಟಕಾಲಕ್ಕೆ ಆದೀತೆಂದು ಜಿಲ್ಲೆಯ ಬೆಳೆಗಾರ ಯಾವತ್ತೂ ಕಾಫಿ ಫಸಲನ್ನು ಮೊದಲು ಮಾರಾಟ ಮಾಡಿದರು, ಬೆಳೆದ ಕರಿಮೆಣಸನ್ನು ಹಾಗೇ ಸಂಗ್ರಹಿಸಿಟ್ಟಿರುತ್ತಾನೆ. ಅದೇ ರೀತಿ ಸಾಕಷ್ಟು ಬೆಳೆಗಾರರ ಮನೆಗಳಲ್ಲಿ ಒಂದಷ್ಟು ಕರಿಮೆಣಸು ಜೋಪಾನವಾಗಿದೆ. ಆದರೆ, ಈಗಿನ ಬೆಲೆಗೆ ಮಾರಾಟ ಮಾಡಿದರೆ ಆತ ದೊಡ್ಡ ಪ್ರಮಾಣದ ನಷ್ಟಕ್ಕೆ ಸಿಲುಕಿಕೊಳ್ಳುವುದು ನಿಶ್ಚಿತ. ಹೀಗೆಂದು ಕರಿಮೆಣಸಿನ ಧಾರಣೆ ಮೇಲೇಳುವ ಯಾವುದೇ ಸಣ್ಣ ಸುಳಿವು ಇಲ್ಲ. ಕನಿಷ್ಠ ಕರಿಮೆಣಸು ಕೃಷಿ, ಕೊಯ್ಲುವಿಗೆ ಮಾಡಿದ ಖರ್ಚಿನಷ್ಟಾದರು ಬೆಲೆ ದೊರೆತಲ್ಲಿ ಮಾರಾಟ ಮಾಡಿಬಿಡುವ ಎನ್ನುವ ನಿರೀಕ್ಷೆಯಲ್ಲಿದ್ದಾನೆ ಆತ.
ಕರಿಮೆಣಸು ಕೃಷಿಗೆ ಮಾಡುವ ಖರ್ಚಿನೊಂದಿಗೆ, ಕಳೆದ ಕೆಲ ಸಾಲುಗಳಿಂದ ಕರಿಮೆಣಸು ಫಸಲು ಕೊಯ್ಲಿನ ಕೂಲಿ 700 ರೂ.ಗಳ ಗಡಿ ದಾಟಿಹೋಗಿದೆ. ಧಾರಣೆ ಕುಸಿದರು ಕೂಲಿಯ ಹಣ ಇಳಿದಿಲ್ಲ. ಅನಿವಾರ್ಯವಾಗಿ ಧಾರಣೆ ಕುಸಿದಿದ್ದರು ದುಬಾರಿ ಕೂಲಿ ನೀಡಿ ಕೊಯ್ಲು ಮಾಡಿದ ಕರಿಮೆಣಸು ಇಂದು ಬೆಳೆಗಾರನನ್ನು ಅಣಕಿಸುತ್ತಿದೆ.
ಕೊಡಗಿನ ಕರಿಮೆಣಸು ವಿಶ್ವ ದರ್ಜೆಯದ್ದಾದರು, ಇದನ್ನು ಉಳಿಸಿಕೊಳ್ಳ್ಳುವ ನಿಟ್ಟಿನಲ್ಲಿ ಆಗಬೇಕಿರುವ ಆಮದು ನೀತಿಗಳ ಬಗ್ಗೆ ಕೇಂದ್ರ ಸರ್ಕಾರವಷ್ಟೆ ನಿರ್ಧಾರ ಕೈಗೊಳ್ಳಬೇಕು. ಅದರಂತೆ ಸುಸ್ಥಿರ ಧಾರಣೆಯನ್ನು ಕಂಡುಕೊಳ್ಳಲು ಕೇಂದ್ರದೊಂದಿಗೆ ರಾಜ್ಯ ಸರ್ಕಾರವೂ ಕೈಜೋಡಿಸಬೇಕು ಎಂದು ಬೆಳೆಗಾರರು ಒತ್ತಾಯಿಸಿದ್ದಾರೆ.