ವಿಜಯಪುರ: ಮುಚ್ಚಿದ್ದ ಪ್ರಾಥಮಿಕ ಆರೋಗ್ಯ ಕೇಂದ್ರದ ಬಾಗಿಲಲ್ಲೇ ಮಹಿಳೆಗೆ ಹೆರಿಗೆ !
ಸಾಂದರ್ಭಿಕ ಚಿತ್ರ
ವಿಜಯಪುರ, ಅ.18: ಪ್ರಾಥಮಿಕ ಆರೋಗ್ಯ ಕೇಂದ್ರದ ಬಾಗಿಲು ಮುಚ್ಚಿದ್ದರಿಂದ ಆಸ್ಪತ್ರೆಯ ಬಾಗಿಲಲ್ಲೇ ಗರ್ಭಿಣಿಗೆ ಸ್ಥಳೀಯ ಮಹಿಳೆಯರು ಹೆರಿಗೆ ಮಾಡಿಸಿಕೊಂಡ ಅಮಾನವೀಯ ಘಟನೆ ವಿಜಯಪುರದ ಸಿಂದಗಿ ತಾಲೂಕಿನ ಬಳಗಾನೂರ ಗ್ರಾಮದಲ್ಲಿ ನಡೆದಿದೆ.
ಆಸ್ಪತ್ರೆಯಲ್ಲಿ ಯಾರೂ ಇಲ್ಲದ ಕಾರಣ ತುಂಬು ಗರ್ಭಿಣಿಗೆ ಆಸ್ಪತ್ರೆ ಹೊರಗೆ ಹೆರಿಗೆ ನಡೆಸಲಾಗಿದೆ ಎನ್ನಲಾಗಿದ್ದು, ಬಳಗಾನೂರ ಗ್ರಾಮದ ಸುನಂದಾ ಹೂಗಾರ ಹೆರಿಗೆಯಾದ ಗರ್ಭಿಣಿ ಮಹಿಳೆ. ಸುನಂದಾಗೆ ಇದು ಎರಡನೇ ಹೆರಿಗೆಯಾಗಿದ್ದು, ಹೆಣ್ಣು ಮಗು ಜನಿಸಿದೆ.
ಇಂದು ಬೆಳಗ್ಗೆ ಸುನಂದಾ ಹೂಗಾರ ಹೆರಿಗೆ ನೋವಿನಿಂದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಆಗಮಿಸಿದ್ದು, ಆದರೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರು ಹಾಗೂ ನರ್ಸ್ ಇಲ್ಲದೆ ಬೀಗ ಹಾಕಲಾಗಿತ್ತು. ಈ ವೇಳೆ ಮಹಿಳೆಗೆ ಹೆರಿಗೆ ನೋವು ಹೆಚ್ಚಾಗಿದ್ದು, ಆಸ್ಪತ್ರೆ ಎದುರೇ ಒದ್ದಾಡುತ್ತಿದ್ದರು. ತಕ್ಷಣ ಇದನ್ನು ಗಮನಿಸಿದ ಗ್ರಾಮದ ಮಹಿಳೆಯರು ಗರ್ಭಿಣಿಗೆ ಸುರಕ್ಷಿತ ಹೆರಿಗೆ ಮಾಡಿಸಿದ್ದಾರೆ ಎಂದು ತಿಳಿದುಬಂದಿದೆ.
Next Story