ವಿದೇಶದಲ್ಲಿ ಕುಡಿದು ಸತ್ತವರ...: ಸಿದ್ದರಾಮಯ್ಯ ಬಗ್ಗೆ ಸಿಟಿ ರವಿ ವಿವಾದಾತ್ಮಕ ಟ್ವೀಟ್
ಬೆಂಗಳೂರು, ಅ.19: ಸಿದ್ದರಾಮಯ್ಯ ಹಾಗೂ ಸಚಿವ ಸಿಟಿ ರವಿ ನಡುವೆ ಟ್ವೀಟ್ ಸಮರ ಮುಂದುವರಿದಿದ್ದು, ಈ ನಡುವೆ ಮಾಜಿ ಸಿಎಂ ಬಗ್ಗೆ ಸಿಟಿ ರವಿ ವಿವಾದಾತ್ಮಕ ಟ್ವೀಟ್ ಮಾಡಿದ್ದಾರೆ.
"ಅಧಿಕಾರ ಇಲ್ಲದಾಗ ಮಾನಸಿಕ ಕಾಯಿಲೆಯಿಂದ ನರಳುವವರು ಕಂಠಪೂರ್ತಿ ಕುಡಿದು ಕಾರು ಅಪಘಾತ ಮಾಡಿ ಅಮಾಯಕರನ್ನು ಸಾಯಿಸುತ್ತಾರೆ. ನಮ್ಮಂತಹವರು ರಾಜಕೀಯದ ಮಧ್ಯೆ ಬಿಡುವು ಮಾಡಿಕೊಂಡು ಇತಿಹಾಸ ಓದಿ, ಸತ್ಯ ತಿಳಿದುಕೊಂಡು ಮಾತಾಡುತ್ತೇವೆ ಎಂಬ ಸಿದ್ದರಾಮಯ್ಯ ಟ್ವೀಟ್ ಗೆ ಪ್ರತಿಕ್ರಿಯಿಸಿದ ಸಚಿವ ಸಿಟಿ ರವಿ, "ಕಂಠಪೂರ್ತಿ ಕುಡಿದು ವಾಹನ ಚಲಾಯಿಸಿ ಕೊಲೆ ಮಾಡಿದವರ ಕುರಿತು ನೀವು ಇಷ್ಟೊಂದು ಮಾತನಾಡುತ್ತಿರುವುದು ನೋಡಿದರೆ ಅವರು ನಿಮ್ಮ ಆಪ್ತ ಬಳಗವೇ ಇರಬೇಕು. ಟಿಪ್ಪು ಸುಲ್ತಾನ್ ಮತ್ತು ಔರಂಗಜೇಬ್ ಅಂತ ಮಹಾ ಕ್ರೂರಿಗಳ ಇತಿಹಾಸ ಓದುವ ನಡುವೆ ವಿದೇಶದಲ್ಲಿ ಕುಡಿದು ಸತ್ತವರ ಕುರಿತ ಸತ್ಯವನ್ನು ಸಹ ನೀವು ತಿಳಿದು ಮಾತನಾಡುತ್ತೀರಿ ಎಂದು ನಂಬಿದ್ದೇನೆ" ಎಂದು ಹೇಳಿದ್ದಾರೆ.
ಸಿಟಿ ರವಿ ಅವರು 'ವಿದೇಶದಲ್ಲಿ ಕುಡಿದು ಸತ್ತವರ..' ಎಂಬ ವಾಕ್ಯವನ್ನು ಸಿದ್ದರಾಮಯ್ಯ ಮಗನ ಸಾವಿನ ಕುರಿತು ಬಳಸಿದ್ದಾರೆ ಎಂದು ಟ್ವಿಟರ್ ನಲ್ಲಿ ಆರೋಪಗಳು ಕೇಳಿ ಬರುತ್ತಿದ್ದು, ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.