ಸಂಸ್ಥೆಯ ನಾಯಕನ ಆಯ್ಕೆಗೆ ಅಭಿವೃದ್ದಿಯ ಚಿಂತನೆ ಅಗತ್ಯ: ಶಾಸಕ ಕೆ.ಶ್ರೀನಿವಾಸಗೌಡ
ಕೋಲಾರ, ಅ.21: ಜಾತಿ, ಪಕ್ಷ, ರಾಜಕಾರಣ ನೋಡಿ ಒಂದು ಸಂಸ್ಥೆಗೆ ನಾಯಕನನ್ನು ಆಯ್ಕೆ ಮಾಡುವ ಮನಸ್ಥಿತಿಯಿಂದ ನಾವು ದೂರವಾಗಿ ಯೋಚಿಸಿದಾಗ ಮಾತ್ರವೇ ಅಭಿವೃದ್ದಿ, ಸಾಧನೆ ಸಾಧ್ಯ ಎಂಬುದಕ್ಕೆ ಡಿಸಿಸಿ ಬ್ಯಾಂಕ್ ಸ್ವಷ್ಟ ಉದಾಹರಣೆ ಎಂದು ಶಾಸಕ ಕೆ.ಶ್ರೀನಿವಾಸಗೌಡ ಅಭಿಪ್ರಾಯಪಟ್ಟರು.
ಸೋಮವಾರ ತಾಲೂಕಿನ ಮದ್ದೇರಿ ರೇಷ್ಮೆ ಬೆಳೆಗಾರರ ಹಾಗೂ ರೈತ ಸೇವಾ ಸಹಕಾರ ಸಂಘ, ಡಿಸಿಸಿ ಬ್ಯಾಂಕ್ ಸಹಯೋಗದಲ್ಲಿ ಸ್ತ್ರೀ ಶಕ್ತಿ ಸಂಘಗಳಿಗೆ ಸಾಲ ವಿತರಿಸಿ ಅವರು ಮಾತನಾಡುತ್ತಿದ್ದರು.
ಒಂದು ಸಂಸ್ಥೆ ಉಳಿಯಲು, ಬೆಳೆಯಲು ಆ ಸಂಸ್ಥೆಗೆ ನಾಯಕನ ನೇಮಕವು ರಾಜಕಾರಣ, ಪಕ್ಷ, ಜಾತಿಯಿಂದ ಹೊರತಾಗಿ ನಡೆಯಬೇಕು. ಅಂತಹ ಕೆಲಸ ಡಿಸಿಸಿ ಬ್ಯಾಂಕಿನಲ್ಲಿ ಆಗಿ, ಬ್ಯಾಲಹಳ್ಳಿ ಗೋವಿಂದಗೌಡರು ಆಯ್ಕೆಯಾಗಿದ್ದರಿಂದಲೇ ಇಂದು ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳ ಜನತೆಗೆ ಆರ್ಥಿಕ ಪ್ರಯೋಜನ ಸಿಕ್ಕಿದೆ. ಸರ್ಕಾರದ ವಿವಿಧ ಸಾಲ, ಶೂನ್ಯಬಡ್ಡಿ, ಸಾಲ ಮನ್ನಾ ಯೋಜನೆಗಳ ಪ್ರಯೋಜನ ಸಿಗುವಂತಾಯಿತು ಎಂದರು.
ಜನ ಯಾವ ಉದ್ದೇಶಕ್ಕಾಗಿ ನಮ್ಮನ್ನು ಆಯ್ಕೆ ಮಾಡಿದ್ದಾರೆ ಎಂಬುದನ್ನು ಅರಿತು ಜವಾಬ್ದಾರಿಯಿಂದ ಕೆಲಸ ಮಾಡಿದಾಗ ನಮ್ಮ ಸ್ಥಾನಕ್ಕೆ ಗೌರವ ಸಿಗುತ್ತದೆ. ಮತ್ತೆ ಜನ ನಮ್ಮನ್ನು ಗೌರವದಿಂದ ಕಾಣುತ್ತಾರೆ. ಮನುಷ್ಯ ಅಧಿಕಾರದಲ್ಲಿ ಇದ್ದಷ್ಟು ದಿನ ಮಾಡಿದ ಒಳ್ಳೆಯ ಕೆಲಸಗಳು ಸಮಾಜದಲ್ಲಿ ಶಾಶ್ವತವಾಗಿ ಉಳಿಯಲು ಸಾಧ್ಯ ಎಂದರು.
ನಾನು ಸಹ ಎರಡು ಬಾರಿ ಬ್ಯಾಂಕಿನ ಅಧ್ಯಕ್ಷನಾಗಿ ಕಾರ್ಯನಿರ್ವಹಿಸಿದ್ದೇನೆ. ಆನಂತರ ರಾಜಕೀಯ ಲಾಭಕ್ಕಾಗಿ ಅಧಿಕಾರಕ್ಕೆ ಬಂದವರು ವ್ಯವಸ್ಥೆಯನ್ನು ಹಾಳು ಮಾಡಿದರು. ರಾಜಕೀಯ ರಹಿತವಾಗಿ ಕೆಲಸ ಮಾಡುವ ಜವಾಬ್ದಾರಿಯುತ ವ್ಯಕ್ತಿಗೆ ಅಧಿಕಾರಕೊಟ್ಟಾಗ ಜನಪರ ಕೆಲಸಗಳನ್ನು ಮಾಡುತ್ತಾರೆ ಎಂಬುದಕ್ಕೆ ದಿವಾಳಿಯಾಗಿದ್ದ ಡಿಸಿಸಿ ಬ್ಯಾಂಕ್ ಇಂದು ರಾಜ್ಯದಲ್ಲೇ ನಂ.1 ಆಗಿರುವುದೇ ಸಾಕ್ಷಿ ಎಂದರು. ಒಂದು ಸಂಸ್ಥೆಯ ಉಳಿವಿಗೆ ಶ್ರಮಿಸುವ ವ್ಯಕ್ತಿಗೆ ಅಧಿಕಾರ ನಡೆಸುವ ಅವಕಾಶ ನೀಡಬೇಕು. ಬ್ಯಾಂಕಿನ ಆಡಳಿತ ಮಂಡಳಿಯವರು ರಾಜಕೀಯ ಲಾಭಕ್ಕೆ ಕೆಲಸ ಮಾಡದೆ ಆರ್ಥಿಕವಾಗಿ ಶಕ್ತಿ ತುಂಬಿದ್ದಾರೆ ಎಂದು ತಿಳಿಸಿದರು.
ಅಧಿಕಾರದಲ್ಲಿ ಇರುವವರು ಯಾವುದೇ ರಂಗದಲ್ಲಿದ್ದರೂ ಮುಂದಾಲೋಚನೆ ಇಟ್ಟುಕೊಂಡು ಯೋಜನೆ ರೂಪಿಸಬೇಕು. ಬ್ಯಾಂಕಿನ ಹಿಂದಿನ ಪರಿಸ್ಥಿತಿ ನೆನಪಿಸಿಕೊಂಡರೆ ಬೇಸರವಾಗುತ್ತಿತ್ತು. ಆದರೆ ಈಗ ಬ್ಯಾಂಕಿನ ಅಧ್ಯಕ್ಷ ಮತ್ತು ಆಡಳಿತ ಮಂಡಳಿಯವರು ಸೇರಿಕೊಂಡು ರಾಜ್ಯ, ರಾಷ್ಟ್ರ ಮಟ್ಟದವರೆಗೂ ಅಭಿವೃದ್ಧಿಪಡಿಸಿರುವುದು ನಿಜಕ್ಕೂ ಶ್ಲಾಘನೀಯ ಎಂದು ಸಂತಸ ವ್ಯಕ್ತಪಡಿಸಿದರು.
ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಎಂ.ಗೋವಿಂದಗೌಡ ಮಾತನಾಡಿ, ಮದ್ದೇರಿ ಸೋಸೈಟಿ ವ್ಯಾಪ್ತಿಯ 18 ಗ್ರಾಮಗಳಲ್ಲಿನ ಪ್ರತಿ ಕುಟುಂಬಕ್ಕೂ ಶೂನ್ಯ ಬಡ್ಡಿದರಲ್ಲಿ ಸಾಲ ವಿತರಣೆ ಮಾಡಲಾಗುವುದು ಎಂದು ಭರವಸೆ ನೀಡಿದರು.
ಮದ್ದೇರಿ ಸೊಸೈಟಿಯಿಂದ ಇದುವರೆಗೂ 10 ಕೋಟಿ ರೂಗಳ ವಿವಿಧ ಸಾಲ ನೀಡಿದ್ದು, ಫಲಾನುಭವಿಗಳು ಪ್ರಾಮಾಣಿಕವಾಗಿ ಮರುಪಾವತಿ ಮಾಡುತ್ತಿದ್ದಾರೆ. ಇದನ್ನು ಗಮನಿಸಿ ಮತ್ತಷ್ಟು ಮಂದಿಗೆ ಇದೀಗ 76 ಲಕ್ಷ ರೂ ಸಾಲ ನೀಡಲಾಗುತ್ತಿದೆ ಎಂದು ಹೇಳಿದರು.
ಮಹಿಳಾ ಸಂಘಗಳವರು ಪ್ರತಿವಾರ ಸಭೆ ನಡೆಸಬೇಕು. ಹಣ ಕಾಸು ವಾಹಿವಾಟಿನ ಬಗ್ಗೆ ಅರಿವು ಪಡೆದುಕೊಳ್ಳಬೇಕು. ಬ್ಯಾಂಕಿನಲ್ಲಿ ಪಡೆದುಕೊಂಡಿರುವ ಸಾಲವನ್ನು ಸದುಪಯೋಗಿಸಿಕೊಳ್ಳದಿದ್ದರೆ ಸಾಲದ ಕಂತು ಪಾವತಿ ಮಾಡಲು ಸಮಸ್ಯೆಯಾಗುತ್ತದೆ. ಹಣವನ್ನು ವ್ಯರ್ಥ ಮಾಡಿಕೊಳ್ಳದೆ ಸದುದ್ದೇಶಕ್ಕೆ ಬಳಕೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಡಿಸಿಸಿ ಬ್ಯಾಂಕ್ ನಿರ್ದೇಶಕ ನಾಗನಾಳ ಸೋಮಣ್ಣ, ಕೆ.ವಿ.ದಯಾನಂದ್, ಯಲವಾರ ಸೊಣ್ಣೇಗೌಡ, ಟಿಎಪಿಸಿಎಂಎಸ್ ನಿರ್ದೇಶಕ ಇ.ಗೋಪಾಲಪ್ಪ, ಪಿಎಲ್ಡಿ ಬ್ಯಾಂಕ್ ನಿರ್ದೇಶಕ ಚಂಜಿಮಲೆ ರಮೇಶ್, ಸೊಸೈಟಿ ಉಪಾಧ್ಯಕ್ಷ ನಾಗರಾಜ್, ಸಿಇಒ ಭಾಸ್ಕರ್ ಮತ್ತಿತರರು ಉಪಸ್ಥಿತರಿದ್ದರು.