ರಾಣಿ ಚನ್ನಮ್ಮ ಶೌರ್ಯ ಯುವ ಪೀಳಿಗೆಗೆ ಮಾದರಿಯಾಗಲಿ: ಸಚಿವೆ ಶಶಿಕಲಾ ಜೊಲ್ಲೆ
ಬೆಳಗಾವಿ, ಅ.23: ಕಿತ್ತೂರು ರಾಣಿ ಚನ್ನಮ್ಮ ಹಾಗೂ ಸಂಗೊಳ್ಳಿ ರಾಯಣ್ಣ ಅವರ ಆದರ್ಶಗಳು, ಶೌರ್ಯವು ಇಂದಿನ ಹಾಗೂ ನಮ್ಮ ಮುಂದಿನ ಪೀಳಿಗೆಗೆ ಮಾದರಿಯಾಗಬೇಕಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.
ಬುಧವಾರ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಕಾಕತಿ ಗ್ರಾಮದಲ್ಲಿ ಆಯೋಜಿಸಿದ್ದ ಕಿತ್ತೂರು ರಾಣಿ ಚನ್ನಮ್ಮ ಮೂರ್ತಿ ಪೂಜೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಧೈರ್ಯ ಮತ್ತು ಸಾಹಸದಲ್ಲಿ ಕಿತ್ತೂರು ರಾಣಿ ಚನ್ನಮ್ಮ ನಾಡಿನ ಮಹಿಳೆಯರಿಗೆ ಸ್ಫೂರ್ತಿಯಾಗಿದ್ದಾರೆ. ಕಾಕತಿ ಗ್ರಾಮದಲ್ಲಿ ಜನಿಸಿದ ಚನ್ನಮ್ಮ ಸ್ವಾತಂತ್ರ್ಯದ ರಣಕಹಳೆಯನ್ನು ಮೊಳಗಿಸಲು ಅವರ ತಂದೆ ತಾಯಿ ಪ್ರಮುಖ ಕಾರಣರಾಗಿದ್ದಾರೆ ಎಂದು ಶಶಿಕಲಾ ಜೊಲ್ಲೆ ತಿಳಿಸಿದರು.
ಬ್ರಿಟಿಷರ ವಿರುದ್ಧ ಹೋರಾಡಿದ ದಿಟ್ಟ ಮಹಿಳೆ ಚನ್ನಮ್ಮಳ ವೀರತನವನ್ನು, ಸಂಗೊಳ್ಳಿ ರಾಯಣ್ಣನ ಪ್ರಾಮಾಣಿಕತೆಯನ್ನು ನಾಡಿನ ಪ್ರತಿಯೊಂದು ಮನೆಯ ಮಕ್ಕಳಿಗೂ ತಿಳಿಸಬೇಕು ಎಂದು ಅವರು ಹೇಳಿದರು.
ಚನ್ನಮ್ಮ ಆದರ್ಶಗಳನ್ನು ಪ್ರತಿಯೊಬ್ಬ ಮಹಿಳೆಯರು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ಜೀವನವನ್ನು ನಡೆಸಬೇಕು. ಅದಕ್ಕಾಗಿ ನಾನು ಸಹ ಅವರ ಒಳ್ಳೆಯತನವನ್ನು ನನ್ನ ಜೀವನದಲ್ಲಿ ಅಳವಡಿಸಿಕೊಂಡು ಮುನ್ನಡೆಯುತ್ತಿದ್ದೇನೆ ಎಂದು ಶಶಿಕಲಾ ಜೊಲ್ಲೆ ಹೇಳಿದರು.
ತನ್ನ ಪ್ರಜೆಗಳ ಶಾಂತಿ ಸುಖಕ್ಕಾಗಿ ತನ್ನ ಪ್ರಾಣದ ಹಂಗು ತೊರೆದು ಹೋರಾಡಿದ ದಿಟ್ಟ ಮಹಿಳೆ ವೀರ ರಾಣಿ ಕಿತ್ತೂರು ಚನ್ನಮ್ಮ ಹಾಗಾಗಿ ಪ್ರತಿಯೊಂದು ಮನೆಯಲ್ಲಿ ಚನ್ನಮ್ಮರಂತಹ ಮಗಳು ರಾಯಣ್ಣರಂತಹ ಮಗ ಜನಿಸಲಿ ಎಂದು ಅವರು ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಯಮಕನಮರಡಿ ಕ್ಷೇತ್ರದ ಶಾಸಕ ಸತೀಶ್ ಜಾರಕಿಹೊಳಿ ಮಾತನಾಡಿ, ಪ್ರತಿ ವರ್ಷವು ಕಾಕತಿಯಲ್ಲಿ ಚನ್ನಮ್ಮನ ಮೂರ್ತಿಯ ಪೂಜೆಯ ಬಳಿಕ ಕಿತ್ತೂರಿನಲ್ಲಿ ಸಂಭ್ರಮದಿಂದ ಉತ್ಸವ ಆಚರಿಸಲಾಗುತ್ತದೆ ಎಂದರು.
ಇವತ್ತಿನ ದಿನಗಳಲ್ಲಿ ಕಲೆ, ಇತಿಹಾಸ ನಾಶವಾಗುತ್ತಿದ್ದು, ಅವುಗಳಿಗೆ ಮರು ಜೀವ ಕೊಡುವ ಉದ್ದೇಶದಿಂದ ಇಂತಹ ಕಾರ್ಯಕ್ರಮ ಮಾಡಲಾಗುತ್ತಿದೆ. ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಸ್ವಾತಂತ್ರ್ಯ ಕಿಚ್ಚು ಹಚ್ಚಿದ ರಾಣಿ ಚನ್ನಮ್ಮರ ಆದರ್ಶಗಳ ತಿಳಿಸುವ ಕಾರ್ಯಗಳು ಹಲವು ವರ್ಷಗಳಿಂದ ನಡೆಯುತ್ತಿವೆ ಎಂದು ಅವರು ತಿಳಿಸಿದರು. ಊರಿನ ಹಿರಿಯರು ಇಲ್ಲಿ ಅಗತ್ಯವಿರುವ ಅಭಿವೃದ್ಧಿ ಕಾರ್ಯಗಳ ಬಗ್ಗೆ ನಮ್ಮ ಗಮನಕ್ಕೆ ತಂದಿದ್ದು, ಅವುಗಳನ್ನು ಸರಕಾರದ ಮುಖಾಂತರ ಜಿಲ್ಲಾ ಮಟ್ಟದಲ್ಲಿ ಅನುಮೋದನೆ ಕೊಡುವ ಕೆಲಸವನ್ನು ಮಾಡಲಾಗುತ್ತದೆ ಎಂದು ಅವರು ಹೇಳಿದರು.
ಇದೇ ವೇಳೆಯಲ್ಲಿ ಚನ್ನಮ್ಮನ ವಂಶಸ್ಥರಾದ ಬಾಬಾಸಾಹೇಬ್ ದೇಸಾಯಿ, ಪ್ರಭುಲಿಂಗ ದೇಸಾಯಿ ಹಾಗೂ ಹಿರಿಯ ಅಧಿಕಾರಿಗಳು, ಊರಿನ ಗಣ್ಯರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಕಾಕತಿ ಶಿವಪೂಜಾಮಠ ರಾಚಯ್ಯ ಮಹಾಸ್ವಾಮಿ, ಉದಯ ಮಹಾಸ್ವಾಮಿ, ಸಂಸದರ ಅಣ್ಣಾಸಾಹೇಬ್ ಜೊಲ್ಲೆ, ಜಿ.ಪಂ.ಸದಸ್ಯ ಸಿದನಗೌಡ ಸುಣಗಾರ, ತಾ.ಪಂ.ಸದಸ್ಯ ಯಲ್ಲಪ್ಪಕೊಳೆಕರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.