ತರೀಕೆರೆ: ಈಜಲು ತೆರಳಿದ ಯುವಕ ನೀರಿನಲ್ಲಿ ಮುಳುಗಿ ಮೃತ್ಯು
ತರೀಕೆರೆ, ಅ.28: ಹಳ್ಳದ ನೀರಿನಲ್ಲಿ ಈಜಲು ಹೋಗಿದ್ದ ಯುವಕನೋರ್ವ ನೀರಿನಲ್ಲಿ ಮುಳುಗಿ ನಾಪತ್ತೆಯಾಗಿದ್ದ ಘಟನೆ ರವಿವಾರ ತಾಲೂಕಿನ ಇಟ್ಟಿಗೆ ಗ್ರಾಮದಲ್ಲಿ ನಡೆದಿದ್ದು, ನಾಪತ್ತೆಯಾಗಿದ್ದ ಯುವಕನ ಮೃತದೇಹ ಸೋಮವಾರ ಪತ್ತೆಯಾಗಿದೆ.
ತಾಲೂಕಿನ ಎ.ರಂಗಾಪುರ ಗ್ರಾಮದ ನಿವಾಸಿ ಸಂದೀಪ್(18) ಮೃತ ಯುವಕನಾಗಿದ್ದು, ಈತ ರವಿವಾರ ಮಧ್ಯಾಹ್ನ ಇಟ್ಟಿಗೆ ಗ್ರಾಮದಲ್ಲಿದ್ದ ಹಳ್ಳದಲ್ಲಿ ಈಜಲು ಸ್ನೇಹಿತರ ಜತೆಗೆ ಹೋಗಿದ್ದಾನೆ. ಇತ್ತೀಚೆಗೆ ಸುರಿದ ಮಳೆಯಿಂದಾಗಿ ಹಳ್ಳದಲ್ಲಿ ಭಾರೀ ನೀರು ನಿಂತಿದ್ದನ್ನು ಗಮನಿಸದ ಯುವಕ ಹಳ್ಳದ ಮಧ್ಯೆ ಹೋದಾಗ ನೀರಿನಲ್ಲಿ ಮುಳುಗಿದ್ದಾನೆಂದು ತಿಳಿದು ಬಂದಿದೆ.
ಸುದ್ದಿ ತಿಳಿದ ಪೊಲೀಸರು ರವಿವಾರ ಇಡೀ ದಿನ ನೀರಿನಲ್ಲಿ ಮುಳುಗಿದ್ದ ಯುವಕನಿಗಾಗಿ ಶೋಧ ನಡೆಸಿದ್ದರೂ ಪ್ರಯೋಜನವಾಗಿರಲಿಲ್ಲ. ಸೋಮವಾರ ಮತ್ತೆ ಹುಡುಕಾಟ ಆರಂಭಿಸಿದ ವೇಳೆ ಸಂದೀಪ್ನ ಮೃತದೇಹ ಪತ್ತೆಯಾಗಿದೆ.
Next Story