ಕಾಂಗ್ರೆಸ್-ಬಿಜೆಪಿ ಇಬ್ಬರನ್ನೂ ನಂಬಲು ಸಾಧ್ಯವಿಲ್ಲ: ಎಚ್.ಡಿ.ದೇವೇಗೌಡ
ಹೊಸದಿಲ್ಲಿ, ಅ. 30: ಕಾಂಗ್ರೆಸ್-ಬಿಜೆಪಿ ಇಬ್ಬರನ್ನು ನಂಬಲು ಸಾಧ್ಯವಿಲ್ಲ. ಹೀಗಾಗಿ ಉಪಚುನಾವಣೆಯಲ್ಲಿ ಯಾವುದೇ ಪಕ್ಷದೊಂದಿಗೆ ಹೊಂದಾಣಿಕೆ ಇಲ್ಲದೆ ಜೆಡಿಎಸ್ ಸ್ವತಂತ್ರವಾಗಿ ಸ್ಪರ್ಧಿಸಲಿದೆ ಎಂದು ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಸ್ಪಷ್ಟಪಡಿಸಿದ್ದಾರೆ.
ಬುಧವಾರ ದಿಲ್ಲಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಎರಡೂ ರಾಷ್ಟ್ರೀಯ ಪಕ್ಷಗಳೊಂದಿಗೆ ಜೆಡಿಎಸ್ ಸಮಾನ ಅಂತರ ಕಾಯ್ದುಕೊಳ್ಳಲಿದ್ದು, ಡಿಸೆಂಬರ್ ನಲ್ಲಿ ನಡೆಯಲಿರುವ ಹದಿನೈದು ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಪಕ್ಷ ಏಕಾಂಗಿಯಾಗಿ ಸ್ಪರ್ಧಿಸಲಿದೆ ಎಂದರು.
ಮೇ 2018ರಲ್ಲಿ ಫಲಿತಾಂಶದ ನಂತರ ಕಾಂಗ್ರೆಸ್ ಜೊತೆಗೆ ಮೈತ್ರಿ ಮಾಡಿಕೊಳ್ಳಲು ನಾನು ಹಿಂಜರಿದಿದ್ದೆ. ಫಲಿತಾಂಶ ಬಳಿಕ ಕಾಂಗ್ರೆಸ್ ಮುಖಂಡರು ನನ್ನನ್ನು ಸಂಪರ್ಕಿಸಿ ಮೈತ್ರಿ ಸರಕಾರದ ಬಗ್ಗೆ ಮನವೊಲಿಸಿದರು. ಆರಂಭಕ್ಕೆ ನಾನು ಒಪ್ಪಿರಲಿಲ್ಲ. ಆ ಬಳಿಕ ಅನಿವಾರ್ಯವಾಗಿ ಮನಸ್ಸು ಬದಲಿಸಿದೆ ಎಂದು ಸ್ಪಷ್ಟನೆ ನೀಡಿದರು.
ಕಾಂಗ್ರೆಸ್ ಹಾಗೂ ಬಿಜೆಪಿ ತಮಗೆ ಅಗತ್ಯ ಬಿದ್ದಾಗ ಬಳಸಿಕೊಳ್ಳುತ್ತಾರೆ. ಅವರ ಕೆಲಸ ಮುಗಿದ ಬಳಿಕ ನಮ್ಮ ಪಕ್ಷವನ್ನು ನಾಶ ಮಾಡಲು ಯತ್ನಿಸುತ್ತಾರೆ. ಎರಡೂ ಪಕ್ಷಗಳ ಸ್ವಭಾವ ಒಂದೇ ಎಂದು ಗುಡುಗಿದ ದೇವೇಗೌಡ, ಉಪ ಚುನಾವಣೆಯಲ್ಲಿ ನಮ್ಮ ಪಕ್ಷದ ಗೆಲುವು ನಿಶ್ಚಿತ ಎಂದರು.