ರಾಜ್ಯೋತ್ಸವ ಪ್ರಶಸ್ತಿ ಪ್ರದಾನಕ್ಕೆ ತಡೆ ನೀಡಲು ಹೈಕೋರ್ಟ್ ನಕಾರ
ಬೆಂಗಳೂರು, ಅ.31: ರಾಜ್ಯ ಸರಕಾರದ 2019ನೆ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಪ್ರದಾನಕ್ಕೆ ತಡೆ ನೀಡಲು ನಿರಾಕರಿಸಿರುವ ಹೈಕೋರ್ಟ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ನೋಟಿಸ್ ಜಾರಿಗೊಳಿಸಲು ನಿರ್ದೇಶಿಸಿದೆ.
ಈ ಕುರಿತು ವಿಜಯನಗರದ ಕೇಶವಗೋಪಾಲ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನ್ಯಾಯಮೂರ್ತಿ ಬಿ.ವೀರಪ್ಪ ಅವರಿದ್ದ ನ್ಯಾಯಪೀಠದಲ್ಲಿ ನಡೆಯಿತು. 2016ರಲ್ಲಿ ರಚನೆಯಾಗಿದ್ದ ಮಾರ್ಗಸೂಚಿಗಳನ್ನು ಉಲ್ಲಂಘಿಸಿ ಬಿಜೆಪಿ ಸರಕಾರವು ಪಕ್ಷದ ಕಾರ್ಯಕರ್ತರಾಗಿರುವ ವಿಜಯ ಸಂಕೇಶ್ವರ, ಪ್ರಕಾಶ್ ಶೆಟ್ಟಿ, ಪ್ರಭಾತ್ ಆರ್ಟ್ ಇಂಟರ್ನ್ಯಾಷನಲ್ಗೆ ರಾಜ್ಯೋತ್ಸವ ಪ್ರಶಸ್ತಿ ಘೋಷಣೆಯಾಗಿದೆ. ಈ ಪ್ರಶಸ್ತಿ ಪ್ರದಾನಕ್ಕೆ ತಡೆ ನೀಡಬೇಕೆಂದು ವಕೀಲ ಜಿ.ಆರ್.ಮೋಹನ್ ಅವರು ಪೀಠಕ್ಕೆ ಮನವಿ ಮಾಡಿದರು.
ನ್ಯಾಯಪೀಠವು ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ನೋಟಿಸ್ ಜಾರಿಗೊಳಿಸಿ, ವಿಚಾರಣೆಯನ್ನು ಮುಂದೂಡಿತು. ಅರ್ಜಿಯಲ್ಲಿ ರಾಜ್ಯ ಸರಕಾರದ ಆಯ್ಕೆ ಸಮಿತಿಯಲ್ಲಿದ್ದ ನಿರುಪಮಾ ರಾಜೇಂದ್ರ, ರಾಜ್ಯ ಸರಕಾರ, ನಿರುಪಮಾ ರಾಜೇಂದ್ರ, ವಿಜಯ ಸಂಕೇಶ್ವರ, ಪ್ರಕಾಶ್ ಶೆಟ್ಟಿ, ಪ್ರಭಾತ್ ಇಂಟರ್ ನ್ಯಾಷನಲ್ ಅನ್ನು ಪ್ರತಿವಾದಿಯನ್ನಾಗಿ ಮಾಡಲಾಗಿದೆ. ಕೇಶವಗೋಪಾಲ್ ಕೂಡ ರಾಜ್ಯೋತ್ಸವ ಪ್ರಶಸ್ತಿಯ ಆಕಾಂಕ್ಷಿಯಾಗಿದ್ದರು.