ಬಿಎಸ್ವೈ ಆಡಿಯೋ ಗುಂಡೂರಾವ್ ಮನೆಯಲ್ಲೇ ಮಿಮಿಕ್ರಿ ಕಲಾವಿದರಿಂದ ಮಾಡಿಸಿರಬಹುದು: ವಿ.ಸೋಮಣ್ಣ
ಬೆಳಗಾವಿ, ನ. 5: ವಿಪಕ್ಷ ನಾಯಕ ಸಿದ್ದರಾಮಯ್ಯ ಇಂದು ಮೊದಲಿನ ಸಿದ್ದರಾಮಯ್ಯರಾಗಿ ಉಳಿದಿಲ್ಲ. ಅವರಿಗೆ ಆತಂಕ-ಭೀತಿ ಆರಂಭವಾಗಿದೆ ಎಂದು ವಸತಿ ಸಚಿವ ವಿ.ಸೋಮಣ್ಣ ಇಂದಿಲ್ಲಿ ಲೇವಡಿ ಮಾಡಿದ್ದಾರೆ.
ಮಂಗಳವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನಿನ್ನೆ ರಾತ್ರಿ ಸಿದ್ದರಾಮಯ್ಯ ಅವರು ನನಗೆ ದೂರವಾಣಿ ಕರೆ ಮಾಡಿದ್ದರು. ಸಂತ್ರಸ್ತರಿಗೆ ಪರಿಹಾರ ವಿತರಿಸುವ ವಿಷಯದಲ್ಲಿ ರಾಜಕಾರಣ ಮಾಡಬೇಡಿ, ಜನರನ್ನು ದಾರಿ ತಪ್ಪಿಸುವ ಕೆಲಸವನ್ನು ಮಾಡಬೇಡಿ ಎಂದು ಕೋರಿದ್ದೇನೆ ಎಂದರು.
ಸಿದ್ದರಾಮಯ್ಯನವರಿಗೆ ಎಲ್ಲ ಕಡೆಯೂ ಸಂಪರ್ಕವಿದ್ದು, ಸ್ನೇಹಿತರು ಇದ್ದಾರೆ. ಬಿಜೆಪಿ ಸಭೆಯ ಆಡಿಯೋವನ್ನು ಅವರೇ ಏಕೆ ಬಿಡುಗಡೆಗೊಳಿಸಿರಬಾರದು? ಎಂದು ಪ್ರಶ್ನಿಸಿದ ಸೋಮಣ್ಣ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮನೆಯಲ್ಲಿಯೇ ಮಿಮಿಕ್ರಿ ಕಲಾವಿದರಿಂದ ಈ ವಿಡಿಯೋ ಕ್ಲಿಪ್ಪಿಂಗ್ ಮಾಡಿಸಿರಬಹುದು ಎಂದು ದೂರಿದರು.
ನೆರೆ ಪೀಡಿತ ಪ್ರದೇಶದಲ್ಲಿ ಕಾಂಗ್ರೆಸ್ ಪಾದಯಾತ್ರೆ ಮಾಡುವುದರಿಂದ ಅವರ ಆರೋಗ್ಯ ಸುಧಾರಿಸಬಹುದು, ಮಾಡಲಿ ಬಿಡಿ ಎಂದು ಸೋಮಣ್ಣ, ನೆರೆ ಪರಿಹಾರ ವಿತರಣೆ ವಿಷಯವನ್ನು ಯಾರೂ ರಾಜಕಾರಣಗೊಳಿಸಬಾರದು ಎಂದು ಇದೇ ವೇಳೆ ಕೋರಿದರು.