ಟಿಪ್ಪು ಜಯಂತಿ ಮಾಡಿದರೆ ಗಲಾಟೆ ಮಾಡುವುದು ಆರೆಸ್ಸೆಸ್ ಮಾತ್ರ: ಮಾಜಿ ಸಿಎಂ ಸಿದ್ದರಾಮಯ್ಯ
ಮೈಸೂರು, ನ.8: ರಾಜ್ಯದಲ್ಲಿ ಟಿಪ್ಪು ಜಯಂತಿ ಆಚರಣೆ ಮಾಡಿದರೆ ಎಲ್ಲಿಯೂ ಗಲಾಟೆ ಆಗುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ನಗರದಲ್ಲಿ ಶುಕ್ರವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿಜೆಪಿ ದಾರ ಇಲ್ಲದೆ ಬುಗುರಿ ಆಡಿಸುತ್ತಿದ್ದಾರೆ. ಟಿಪ್ಪು ಜಯಂತಿ ಆಚರಣೆಗೆ ರಾಜ್ಯದ ಜನರ ವಿರೋಧ ಇಲ್ಲ, ನ್ಯಾಯಾಲಯ ಸಹ ಖಾಸಗಿಯಾಗಿ ಟಿಪ್ಪು ಜಯಂತಿ ಆಚರಣೆಗೆ ಅಡ್ಡಿ ಇಲ್ಲ ಎಂದು ಹೇಳಿದೆ. ಟಿಪ್ಪು ಜಯಂತಿ ಆಚರಣೆ ಮಾಡಿದರೆ ಎಲ್ಲಿಯೂ ಗಲಾಟೆ ಆಗುವುದಿಲ್ಲ. ಗಲಾಟೆ ಮಾಡಿದರೆ ಅದು ಆರೆಸ್ಸೆಸ್ ನವರು ಮಾಡಬೇಕಷ್ಟೆ ಎಂದು ಹೇಳಿದರು.
ನಮ್ಮ ಸರ್ಕಾರದಲ್ಲಿ ಮೂರು ವರ್ಷ ಟಿಪ್ಪು ಜಯಂತಿ ಆಚರಣೆ ಮಾಡಿದ್ದೇವೆ. ಆಗ ಏನಾದರು ಗಲಾಟೆ ಆಗಿತ್ತಾ? ಕೊಡಗು ಬಿಟ್ಟು ಎಲ್ಲಾದರೂ ಗಲಾಟೆ ಆಗಿತ್ತಾ? ಕೊಡಗಿನ ಗಲಾಟೆಯನ್ನು ತಡೆಯಬಹುದಿತ್ತು. ಪೊಲೀಸರ ಬೇಜವಾಬ್ದಾರಿಯಿಂದ ಗಲಾಟೆ ಆಯಿತು ಎಂದು ಹೇಳಿದರು.
ಮೈಸೂರಿನಲ್ಲಿ ಟಿಪ್ಪು ಜಯಂತಿ ಆಚರಣೆಗೆ ಅನುಮತಿ ನೀಡದೆ ಇರುವುದು ತಪ್ಪು. ಬಿಜೆಪಿ ಸರ್ಕಾರ ಅನುಮತಿ ನೀಡಬೇಡಿ ಎಂದು ಹೇಳಿರಬೇಕು, ಅದಕ್ಕೆ ನೀಡಿಲ್ಲ. ಖಾಸಗಿಯಾಗಿ ಟಿಪ್ಪು ಜಯಂತಿ ಆಚರಣೆಗೆ ಅನುಮತಿ ನೀಡಬೇಕು ಎಂದು ಸಿದ್ದರಾಮಯ್ಯ ಆಗ್ರಹಿಸಿದರು.