ವಿವಾದಾತ್ಮಕ ಸುತ್ತೋಲೆ: ಶಿಕ್ಷಣ ಇಲಾಖೆ ಅಧಿಕಾರಿಗಳ ವಿರುದ್ಧ ದೂರು
ಬೆಂಗಳೂರು, ನ. 13: ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಅಪಮಾನ ಮಾಡುವ ರೀತಿಯಲ್ಲಿ ಸುತ್ತೋಲೆ ಹೊರಡಿಸಿದ ಸಾರ್ವಜನಿಕ ಶಿಕ್ಷಣ ಇಲಾಖೆ ಕಾರ್ಯದರ್ಶಿ ಉಮಾಶಂಕರ್, ಆಯುಕ್ತ ಕೆ.ಜಿ.ಜಗದೀಶ್, ನಿರ್ದೇಶಕ ಕೆ.ಎಸ್.ಮಣಿ ಹಾಗೂ ಸಿಎಂಸಿಎ ಸಿಇಓ ಆಶಿಷ್ ಪಾಟೀಲ್ ವಿರುದ್ಧ ನಗರ ಪೊಲೀಸ್ ಆಯುಕ್ತರಿಗೆ ಭಾರತೀಯ ಸಂವಿಧಾನ ರಕ್ಷಣಾ ವೇದಿಕೆ (ಐಸಿಪಿಎಫ್) ದೂರು ನೀಡಿದೆ.
ಬುಧವಾರ ವೇದಿಕೆ ಕಾರ್ಯಕಾರಿ ಸಮಿತಿ ಸದಸ್ಯ ಎಲ್.ಉಮಾಶಂಕರ್ ನೇತೃತ್ವದಲ್ಲಿ ಬೌದ್ಧ ಸಮಾಜದ ಹ.ರಾ.ಮಹೇಶ್, ಎಸ್ಸಿ-ಎಸ್ಟಿ ಗುತ್ತಿಗೆದಾರರ ಸಂಘದ ಅಧ್ಯಕ್ಷ ಮಹದೇವಸ್ವಾಮಿ ಹಾಗೂ ಮೂಲನಿವಾಸಿ ದ್ರಾವಿಡ ಸೇನೆ ಮುನಿಮಾರಪ್ಪ ದೂರು ನೀಡಿದ್ದು, ಕೂಡಲೇ ಮೇಲ್ಕಂಡ ಅಧಿಕಾರಿಗಳ ವಿರುದ್ಧ ಎಸ್ಸಿ-ಎಸ್ಟಿ ದೌರ್ಜನ್ಯ ವಿರೋಧಿ ಕಾಯ್ದೆಯಡಿ ಪ್ರಕರಣ ದಾಖಲಿಸಿ, ಬಂಧಿಸಬೇಕು ಎಂದು ಆಗ್ರಹಿಸಿದೆ.
ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕಾರಿಗಳನ್ನು ಕರ್ತವ್ಯದಿಂದ ವಜಾ ಮಾಡಬೇಕು. ಅಲ್ಲದೆ. ಖಾಸಗಿ ಸಂಸ್ಥೆಯಾದ ಸಿಎಂಸಿಎ ಸಂಸ್ಥೆಯನ್ನು ಕಪ್ಪು ಪಟ್ಟಿಗೆ ಸೇರಿಬೇಕು. ಇಲ್ಲವಾದರೆ ವೇದಿಕೆ ನೇತೃತ್ವದಲ್ಲಿ ಹೋರಾಟ ರೂಪಿಸಬೇಕಾಗುತ್ತದೆ ಎಂದು ವೇದಿಕೆ ಪ್ರಕಟಣೆ ಎಚ್ಚರಿಸಿದೆ.