ಎಚ್.ವಿಶ್ವನಾಥ್ ಹೇಳಿಕೆಗಳಿಗೆ ಪ್ರತಿಕ್ರಿಯೆ ನೀಡುವುದಿಲ್ಲ: ಸಿದ್ದರಾಮಯ್ಯ
ಮೈಸೂರು: ಅರಮನೆ ಮುಂಭಾಗ ಅದ್ದೂರಿ 'ಕನಕದಾಸ ಮೆರವಣಿಗೆ'ಗೆ ಚಾಲನೆ
ಮೈಸೂರು,ನ.15: ಜಿಲ್ಲಾಡಳಿತ ಮತ್ತು ಕನಕದಾಸ ಜಯಂತ್ಯೋತ್ಸವ ಸಮಿತಿ ಆಯೋಜಿಸಿದ್ದ ಕನಕದಾಸರ ಮೆರವಣಿಗೆಗೆ ಮಾಜಿ ಮುಖ್ಯಮಂತ್ರಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಚಾಲನೆ ನೀಡಿದರು.
ನಗರದ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಮುಂಭಾಗ ಶುಕ್ರವಾರ ಕನಕದಾಸರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಮೆರವಣಿಗೆಗೆ ಚಾಲನೆ ನೀಡಲಾಯಿತು. ಈ ವೇಳೆ ಭಾರೀ ನೂಕುನುಗ್ಗಲು ಉಂಟಾಗಿತ್ತು. ಸಿದ್ದರಾಮಯ್ಯ ಅವರು ಜನಜಂಗುಳಿಯ ಮಧ್ಯೆ ಸಿಲುಕಿದರು. ಪರಿಸ್ಥಿತಿ ನಿಭಾಯಿಸಲು ಪೊಲೀಸರು ಹರಸಾಹಸ ಪಟ್ಟರು. ಗುಂಪುಗೂಡಿದ್ದ ಜನರನ್ನು ಪೊಲೀಸರು ಚದುರಿಸುವ ಮೂಲಕ ಪರಿಸ್ಥಿತಿ ತಿಳಿಗೊಳಿಸಿದರು. ಮೈಸೂರು ನಗರ ಡಿಸಿಪಿ ಮುತ್ತುರಾಜ್ ಅವರು ಜನರದಟ್ಟಣೆಯನ್ನು ನಿಯಂತ್ರಿಸಿದರು.
ಈ ವೇಳೆ ಸಿದ್ದರಾಮಯ್ಯ ನಾಡಿನ ಜನತೆಗೆ ಕನಕದಾಸರ ಜಯಂತಿಯ ಶುಭಾಶಯ ಕೋರಿದರು. ಇದೇ ವೇಳೆ ಮಾಧ್ಯಮಗಳು 'ದೇವರಾಜು ಅರಸು ಜೊತೆ ಮೋದಿಯನ್ನು ಸಮೀಕರಿಸಬೇಕು' ಎಂಬ ಎಚ್.ವಿಶ್ವನಾಥ್ ಹೇಳಿಕೆ ಕುರಿತಂತೆ ಪ್ರಶ್ನಿಸಿದಾಗ ಪ್ರತಿಕ್ರಿಯಿಸಲು ನಿರಾಕರಿಸಿದರು. ಎಚ್.ವಿಶ್ವನಾಥ್ ಹೇಳಿಕೆಗಳಿಗೆ ನಾನು ಪ್ರತಿಕ್ರಿಯೆ ಕೊಡುವುದಿಲ್ಲ ಎಂದು ಹೊರಟರು.