ನಾಮಪತ್ರ ಹಿಂಪಡೆಯದಿದ್ದರೆ ಶರತ್ ಬಚ್ಚೇಗೌಡ ಉಚ್ಚಾಟನೆ: ಕೆ.ಎಸ್.ಈಶ್ವರಪ್ಪ
ಶಿವಮೊಗ್ಗ, ನ. 17: ಬಿಜೆಪಿ ಬಂಡಾಯ ಅಭ್ಯರ್ಥಿ ಶರತ್ ಬಚ್ಚೇಗೌಡ ಅವರು ತಮ್ಮ ಉಮೇದುವಾರಿಕೆ ಅರ್ಜಿ ವಾಪಾಸ್ ಪಡೆಯಬೇಕು. ಇಲ್ಲದಿದ್ದರೆ ಅವರನ್ನು ಬಿಜೆಪಿಯಿಂದ ಉಚ್ಚಾಟಿಸುವುದು ಅನಿವಾರ್ಯವಾಗಲಿದೆ ಎಂದು ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದ್ದಾರೆ.
ರವಿವಾರ ನಗರದಲ್ಲಿ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಹೊಸಕೋಟೆ ಉಪ ಚುನಾವಣೆಯಲ್ಲಿ ರಾಜಕೀಯ ಬೆಳವಣಿಗೆಗಳನ್ನು ಪಕ್ಷ ಸೂಕ್ಷ್ಮವಾಗಿ ಗಮನಿಸುತ್ತಿದೆ. ಶರತ್ ನಾಮಪತ್ರ ಹಿಂಪಡೆಯುವ ದಿನದವರೆಗೂ ಕಾಯುತ್ತೆವೆ. ಮನವೊಲಿಕೆಗೂ ಬಗ್ಗದಿದ್ದರೆ ಪಕ್ಷದಿಂದ ಶಿಸ್ತುಕ್ರಮ ಅನಿವಾರ್ಯವಾಗಲಿದೆ ಎಂದು ಹೇಳಿದರು.
ಪಕ್ಷವು ತಮಗೆ ಅಥಣಿ ಕ್ಷೇತ್ರದ ಉಪ ಚುನಾವಣೆ ಜವಾಬ್ದಾರಿ ವಹಿಸಿದೆ. ಸೋಮವಾರ ಅಲ್ಲಿಗೆ ತೆರಳುತ್ತಿದ್ದೆನೆ. ಪಕ್ಷದ ಅಭ್ಯರ್ಥಿ ಮಹೇಶ್ ಕುಮಟಳ್ಳಿ ನಾಮಪತ್ರ ಸಲ್ಲಿಸಲಿದ್ದಾರೆ. ಈಗಾಗಲೇ ಪಕ್ಷದ ನಾಯಕರು ಲಕ್ಷ್ಮಣ್ ಸವದಿ ಬೆಂಬಲಿಗರು ಹಾಗೂ ಪಕ್ಷದ ಕಾರ್ಯಕರ್ತರ ಮನವೊಲಿಸುವ ಕಾರ್ಯ ಮಾಡಿದ್ದಾರೆ ಎಂದು ಹೇಳಿದರು.