ಒಂದು ವೇಳೆ ನಾನು ಮೌನವಾಗಿದ್ದಿದ್ದರೆ....: ಹೆಬ್ಬಾಳ್ಕರ್ ವಿಚಾರದಲ್ಲಿ ರಮೇಶ್ ಜಾರಕಿಹೊಳಿ ಹೇಳಿದ್ದೇನು ?
ಬೆಳಗಾವಿ, ನ. 17: ‘ಜಿಲ್ಲಾ ರಾಜಕಾರಣದಲ್ಲಿ ಡಿ.ಕೆ.ಶಿವಕುಮಾರ್ ಹಸ್ತಕ್ಷೇಪ ಮತ್ತು ನನ್ನ ಜೂನಿಯರ್ ಲಕ್ಷ್ಮಿ ಹೆಬ್ಬಾಳ್ಕರ್ ಅವರನ್ನು ನನ್ನ ತಲೆ ಮೇಲೆ ಕೂರಿಸಿದ್ದನ್ನು ಸಹಿಸದೆ ಕಾಂಗ್ರೆಸ್ ಪಕ್ಷದಿಂದ ಹೊರ ಬರಬೇಕಾಯಿತು’ ಎಂದು ಅನರ್ಹ ಶಾಸಕ ರಮೇಶ್ ಜಾರಕಿಹೊಳಿ ತಿಳಿಸಿದ್ದಾರೆ.
ರವಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ಯಾವುದೇ ಸ್ಥಾನ ನೀಡಬಾರದು ಎಂದು ನಾನು ಷರತ್ತು ಹಾಕಿದ್ದೆ. ಆದರೂ, ಅವರಿಗೆ ಮೈಸೂರು ಮಿನರಲ್ಸ್ ನಿಗಮದ ಅಧ್ಯಕ್ಷ ಸ್ಥಾನ ನೀಡಲಾಗಿತ್ತು ಎಂದು ದೂರಿದರು.
ಒಂದು ವೇಳೆ ನಾನು ಮೌನವಾಗಿದ್ದಿದ್ದರೆ ಅವರಿಗೆ ಸಚಿವ ಸ್ಥಾನವನ್ನೂ ನೀಡುತ್ತಿದ್ದರು. ಇದರ ವಿರುದ್ಧ ಸತೀಶ್ ಜಾರಕಿಹೊಳಿ ಎಂದೂ ಮಾತನಾಡಲಿಲ್ಲ. ಆದರೆ, ಅವರ ಮನೆಗೆ ಹೋಗಿ ಚಹಾ ಕುಡಿಯುತ್ತಿದ್ದ. ಹೀಗಾಗಿ ನಾನು ಅನಿವಾರ್ಯವಾಗಿ ಪಕ್ಷ ತ್ಯಜಿಸುವ ತೀರ್ಮಾನ ಕೈಗೊಳ್ಳಬೇಕಾಯಿತು ಎಂದು ಸ್ಪಷ್ಟಣೆ ನೀಡಿದರು.
ಲಕ್ಷ್ಮಿ ಹೆಬ್ಬಾಳ್ಕರ್ ಅವರು ಪ್ರಭಾವಿಯಾಗಲು ಡಿ.ಕೆ.ಶಿವಕುಮಾರ್ ಅವರೊಬ್ಬರೆ ಕಾರಣರಲ್ಲ. ನಾವೂ ಕಾರಣರಾಗಿದ್ದೇವೆ. ಅದನ್ನು ಅವರು ಅರಿತುಕೊಳ್ಳಬೇಕಿತ್ತು. ಅವರು ಸಚಿವರಾದರೆ ಹೊಟ್ಟೆ ಕಿಚ್ಚುಪಡುವಷ್ಟು ಸಣ್ಣ ಮನುಷ್ಯ ನಾನಲ್ಲ. ಆಕೆ ಸಿಎಂ ಆಗಲಿ ಎಂದು ಲೇವಡಿ ಮಾಡಿದರು.
ಕಾಂಗ್ರೆಸ್ ಪಕ್ಷ ಡಿ.ಕೆ.ಶಿವಕುಮಾರ್ ಕೈಯಲ್ಲಿದೆ. ಹೀಗಾಗಿ ಎಲ್ಲವೂ ನನ್ನದೆ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಮೆರೆದಾಡುತ್ತಿದ್ದರು. ಜಾರಕಿಹೊಳಿ ಅವರಲ್ಲಿ ಏನೂ ಇಲ್ಲ ಎಂದು ನಮ್ಮನ್ನು ನಿರ್ಲಕ್ಷಿಸಿದರು. ರಾಜಕಾರಣದಲ್ಲಿ ಯಾರೂ ದೊಡ್ಡವರಲ್ಲ ಎಂದು ರಮೇಶ್ ಜಾರಕಿಹೊಳಿ ಆಕ್ರೋಶ ಹೊರಹಾಕಿದರು.