ಪ್ರವಾಸೆಕ್ಕೆಂದು ಬಂದಿದ್ದ ಕಾಲೇಜು ವಿದ್ಯಾರ್ಥಿ ಅಣೆಕಟ್ಟೆಗೆ ಬಿದ್ದು ಮೃತ್ಯು
ಮಡಿಕೇರಿ ನ.18: ಪ್ರವಾಸೆಕ್ಕೆಂದು ಬಂದಿದ್ದ ಕಾಲೇಜು ವಿದ್ಯಾರ್ಥಿಗಳು ಹಾರಂಗಿ ಅಣೆಕಟ್ಟೆ ಮುಂಭಾಗದ ನೀರಿನಲ್ಲಿ ಆಟವಾಡುವ ಸಂದರ್ಭ ವಿದ್ಯಾರ್ಥಿಯೋರ್ವ ಕಾಲು ಜಾರಿ ನೀರಿನೊಳಗೆ ಬಿದ್ದು ಮೃತಪಟ್ಟಿರುವ ಘಟನೆ ಸೋಮವಾರ ನಡೆದಿದೆ.
ದಾವಣಗೆರೆ ಜಿಲ್ಲೆಯ ಹೊನ್ನಳ್ಳಿಯ ಶ್ರೀ ಸಾಯಿ ಗುರುಕುಲ ಕಾಲೇಜಿನ ಪುನೀತ್(17) ಮೃತಪಟ್ಟಿರುವ ವಿದ್ಯಾರ್ಥಿ.
ಶ್ರೀ ಸಾಯಿ ಗುರುಕುಲ ಕಾಲೇಜಿನ ಸುಮಾರು 90 ವಿದ್ಯಾರ್ಥಿಗಳು ಎರಡು ಬಸ್ಸುಗಳಲ್ಲಿ ಪ್ರವಾಸಕ್ಕೆಂದು ಬಂದು, ಹಾರಂಗಿ ಅಣೆಕಟ್ಟೆಯನ್ನು ವೀಕ್ಷಿಸುತ್ತಿದ್ದರು. ಸುಮಾರು 20 ವಿದ್ಯಾರ್ಥಿಗಳು ಹಾರಂಗಿಯ ಎದುರಿನ ರಸ್ತೆಯ ಪಕ್ಕದ ತಡೆಗೋಡೆಯನ್ನು ಹಾರಿ ಅಣೆಕಟ್ಟೆಯ ನೀರು ಧುಮುಕುವ ಸ್ಥಳಕ್ಕೆ ಇಳಿದು ನೀರಿನಲ್ಲಿ ಆಟವಾಡುತ್ತಿದ್ದ ಸಂದರ್ಭ ಪುನೀತ್ ಎಂಬ ವಿದ್ಯಾರ್ಥಿ ಕಾಲು ಜಾರಿ ಆಳವಾದ ಜಾಗಕ್ಕೆ ಬಿದ್ದು ಸಾವನ್ನಪ್ಪಿದ್ದಾನೆ ಎಂದು ಹೇಳಲಾಗಿದೆ.
ವಿಷಯ ತಿಳಿದ ಕೂಡಲೇ ಅಗ್ನಿಶಾಮಕ ದಳದ ಸಿಬ್ಬಂದಿಗಳು ವಿದ್ಯಾರ್ಥಿಯನ್ನು ನೀರಿನಿಂದ ಹೊರ ತೆಗೆದು, ಕುಶಾಲನಗರ ಸಮುದಾಯ ಆರೋಗ್ಯ ಕೇಂದ್ರಕ್ಕೆ ಸಾಗಿಸಿದರೂ ನೀರಿಗೆ ಬಿದ್ದಾಗಲೇ ವಿದ್ಯಾರ್ಥಿ ಸಾವನ್ನಪ್ಪಿದ್ದಾಗಿ ವೈದ್ಯರು ದೃಢಪಡಿಸಿದ್ದಾರೆ.
ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೃತ ಪುನೀತ್ ಶ್ರೀ ಸಾಯಿ ಗುರುಕುಲ ಕಾಲೇಜಿನಲ್ಲಿ ಪ್ರಥಮ ಪಿಯುಸಿಯ ವಿಜ್ಞಾನ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದು, ಹೊನ್ನಳ್ಳಿ ಸಮೀಪದ ಅಜ್ಜಂಪುರ ಗ್ರಾಮದ ನಿವಾಸಿ ಎಂದು ತಿಳಿದು ಬಂದಿದೆ.