ಭಸ್ಮಾಸುರನ ಕಥೆ ಹೇಳಿ ರಮೇಶ್ ಜಾರಕಿಹೊಳಿಯನ್ನು ಕುಟುಕಿದ ಲಕ್ಷ್ಮಿ ಹೆಬ್ಬಾಳ್ಕರ್
ಬೆಳಗಾವಿ, ನ.25: ಭಸ್ಮಾಸುರ ಎಂಬುವವನಿದ್ದ. ಆತ ಯಾರ ಮೇಲೆ ಕೈ ಇಡುತ್ತಾನೋ ಅವರು ಸುಟ್ಟು ಹೋಗುತ್ತಿದ್ದರು. ಒಂದು ದಿನ ಆತ ತನ್ನ ಮೇಲೆ ತಾನೇ ಕೈ ಇಟ್ಟುಕೊಂಡು ಸುಟ್ಟು ಹೋದ ಎನ್ನುವ ಮೂಲಕ ಅನರ್ಹ ಶಾಸಕ ರಮೇಶ್ ಜಾರಕಿಹೊಳಿ ವಿರುದ್ಧ ಕಾಂಗ್ರೆಸ್ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ.
ಸೋಮವಾರ ಅಥಣಿ ತಾಲೂಕಿನ ನಂದಿ ಇಂಗಳಗಾಂವ ಗ್ರಾಮದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗಜಾನನ ಮಂಗಸೂಳಿ ಪರವಾಗಿ ಪ್ರಚಾರ ನಡೆಸುತ್ತಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕಾಂಗ್ರೆಸ್ ಪಕ್ಷವನ್ನು ಖಾಲಿ ಮಾಡುವ ಶಕ್ತಿ ನಮಗಿದೆ’ ಎಂದು ರಮೇಶ್ ಜಾರಕಿಹೊಳಿ ನೀಡಿದ್ದ ಹೇಳಿಕೆ ಕುರಿತು ಕೇಳಿದ ಪ್ರಶ್ನೆಗೆ ಈ ಮೇಲಿನಂತೆ ಪ್ರತಿಕ್ರಿಯಿಸಿದರು.
ರಮೇಶ್ ಜಾರಕಿಹೊಳಿ ದೇವರು, ದೊಡ್ಡವರು ಎಂದು ಆಕಾಶ ನೋಡಿ ಕೈ ಮುಗಿದ ಲಕ್ಷ್ಮಿ ಹೆಬ್ಬಾಳ್ಕರ್, ಇದೇ ವೇಳೆ ಭಸ್ಮಾಸುರನ ಬಗ್ಗೆ ಉಲ್ಲೇಖಿಸಿದರು. ಬೆಳಗಾವಿ ಜಿಲ್ಲೆಯಲ್ಲಿ ಹೊಂದಾಣಿಕೆ ರಾಜಕಾರಣ ಮೊದಲಿನಿಂದಲೂ ನಡೆದುಕೊಂಡು ಬಂದಿದೆ. ಇದನ್ನು ಕೊನೆಗಾಣಿಸುವ ನಿಟ್ಟಿನಲ್ಲಿ ಮತದಾರರು ಮುಂದಾಗಬೇಕು ಎಂದರು.