ಕುಮಾರಣ್ಣ ಇಲ್ಲದಿದ್ದರೆ ಇವರೆಲ್ಲಾ ಜೈಲಲ್ಲಿರಬೇಕಿತ್ತು: ಅನರ್ಹ ಶಾಸಕರ ವಿರುದ್ಧ ರೇವಣ್ಣ ವಾಗ್ದಾಳಿ
ಮಂಡ್ಯ, ನ.27: ಕುಮಾರಣ್ಣ ಇಲ್ಲದಿದ್ದರೆ ಇವರೆಲ್ಲಾ ಜೈಲಲ್ಲಿರಬೇಕಿತ್ತು. ಸ್ವಾಮೀಜಿಗಳು ತಥಾಸ್ತು ಎನ್ನುವ ಹಾಗೆ ಕುಮಾರಣ್ಣ ತಥಾಸ್ತು ಅಂದದ್ದಕ್ಕೆ ಇನ್ನೂ ಇದ್ದಾರೆ ಎಂದು ಜೆಡಿಎಸ್ ಅನರ್ಹ ಶಾಸಕರ ವಿರುದ್ಧ ಮಾಜಿ ಸಚಿವ ಎಚ್.ಡಿ.ರೇವಣ್ಣ ವಾಗ್ದಾಳಿ ನಡೆಸಿದ್ದಾರೆ.
ಕೆ.ಆರ್.ಪೇಟೆ ಉಪಚುನಾವಣೆಯ ಜೆಡಿಎಸ್ ಅಭ್ಯರ್ಥಿ ಬಿ.ಎಲ್.ದೇವರಾಜು ಪರ ಕಿಕ್ಕೇರಿಯಲ್ಲಿ ಬುಧವಾರ ಆಯೋಜಿಸಿದ್ದ ಚುನಾವಣಾ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.
ನಾರಾಯಣಗೌಡ ಇಲ್ಲಿ ವಸೂಲಿ ಮಾಡಿಕೊಂಡು ಬಾಂಬೆಗೆ ಹೋಗ್ತಾನೆ. ಇವನನ್ನು ಬಾಂಬೆಗೆ ಪರ್ಮನೆಂಟಾಗಿ ಕಳಿಸಿಬಿಡಿ. ಹುಣಸೂರು ಹಳ್ಳಿಹಕ್ಕಿ ಒಳ್ಳೆ ಹಕ್ಕಿ ಆಗಿದ್ರೆ ಎಲ್ಲಾದರೂ ಒಂದು ಕಡೆ ಇರುತ್ತಿತ್ತು. ಇನ್ನು ಮಹಾಲಕ್ಷ್ಮೀ ಲೇಔಟ್ ನವನೊಬ್ಬ ಬಿಜೆಪಿಗೆ ಹೋಗಿದ್ದಾನೆ ಎಂದು ಅವರು ಕಿಡಿಕಾರಿದರು.
ಹೇಮಾವತಿ ನೀರು ಸೇರಿದಂತೆ ಕೆ.ಆರ್.ಪೇಟೆ ತಾಲೂಕಿಗೆ ದೇವೆಗೌಡರು ಸಾಕಷ್ಟು ಕೊಡುಗೆ ನೀಡಿದ್ದಾರೆ. ಕೆ.ಅರ್.ಪೇಟೆ ತಾಲೂಕಿನವರೇ ಆಗಿ ಏನೂ ಮಾಡದೆ ಇಲ್ಲಿಗೆ ಬಂದು ಕೇಳುತ್ತಿರುವ ಯಡಿಯೂರಪ್ಪಗೆ ಮಾನ ಮರ್ಯಾದೆ ಇಲ್ಲ. ನಮ್ಮತ್ರ ನೋಟ್ ಪ್ರಿಂಟ್ ಮಾಡುವ ಮಿಷನ್ ಇಲ್ಲ ಎಂದವರು ಹೇಗೆ ಅಭಿವೃದ್ದಿ ಮಾಡ್ತಾರೆ ? ಜನರ ಶಾಪದಿಂದಲೇ ಈ ಸರಕಾರ ಹೋಗುತ್ತೆ. ಇದನ್ನು ಅರ್ಥ ಮಾಡಿಕೊಂಡು ಬಿ.ಎಲ್.ದೇವರಾಜುಗೆ ಮತ ನೀಡಿ ಎಂದು ಅವರು ಮನವಿ ಮಾಡಿದರು.