ನಾಪತ್ತೆಯಾಗಿದ್ದ ಪ್ರೇಮಿಗಳು ಠಾಣೆಯಲ್ಲಿ ಪ್ರತ್ಯಕ್ಷ: ಹಲ್ಲೆಗೆ ಮುಂದಾದ ಪೋಷಕರು, ಪೊಲೀಸರಿಂದ ತಡೆ
ಕೊಳ್ಳೇಗಾಲ,ನ.28: ಕಳೆದ 1 ವಾರದಿಂದ ತಾಲೂಕಿನ ಸರಗೂರಿನಿಂದ ನಾಪತ್ತೆಯಾಗಿದ್ದ ಪ್ರೇಮಿಗಳಿಬ್ಬರು ಇಂದು ಗ್ರಾಮಾಂತರ ಠಾಣೆಯಲ್ಲಿ ಪ್ರತ್ಯಕ್ಷಗೊಂಡಾಗ ಅವರ ಹಲ್ಲೆ ಮಾಡಲು ಯುವತಿಯ ಪೋಷಕರು ಮುಂದಾಗಿದ್ದು, ಈ ವೇಳೆ ಪೊಲೀಸರು ತಡೆದ ಘಟನೆ ನಡೆಯಿತು.
ಕಳೆದ 5 ವರ್ಷಗಳಿಂದ ಇದೇ ಗ್ರಾಮದ ಶಿವಮಾದಪ್ಪ ಹಾಗೂ ಜಮುನ ಪರಸ್ಪರ ಪ್ರೀತಿಸುತ್ತೀದ್ದರು. ಒಂದು ವಾರದ ಹಿಂದೆ ಜಮುನಾಳಿಗೆ ಬೇರೊಂದು ಹುಡುಗನ ಜೊತೆ ಮದುವೆ ಮಾಡಲು ಪೋಷಕರು ನಿರ್ಧರಿಸಿದ್ದು, ಇದರಿಂದ ಬೇಸತ್ತು ಪ್ರೇಮಿಗಳು ಕಣ್ಮರೆಯಾಗಿದ್ದರು ಎನ್ನಲಾಗಿದೆ. ಬಳಿಕ ಪೋಷಕರು ಪೊಲೀಸರಿಗೆ ದೂರು ಸಲ್ಲಿಸಿ ಪತ್ತೆಗೆ ಮನವಿ ಮಾಡಿದ್ದರು.
ಠಾಣೆಗೆ ದೂರು ನೀಡಿದ ವಿಚಾರ ತಿಳಿದ ಪ್ರೇಮಿಗಳು ಇಂದು ಠಾಣೆಗೆ ಬಂದಾಗ ಕುಪಿತಗೊಂಡ ಪೋಷಕರು ಹಾಗೂ ಸಂಬಂಧಿಕರು ಯುವತಿ ಮೇಲೆ ಹಲ್ಲೆಗೆ ಮುಂದಾಗಿದ್ದು, ಈ ವೇಳೆ ಪೊಲೀಸರು ಮಧ್ಯಪ್ರವೇಶಿಸಿ ಅವರನ್ನು ತಡೆದಿದ್ದಾರೆ. ವಯಸ್ಕರಾಗಿರುವ ಕಾರಣ ಅವರಿಬ್ಬರನ್ನೂ ಅಲ್ಲಿಂದ ಕಳುಹಿಸಿ ಹಲ್ಲೆಗೆ ಯತ್ನಿಸಿದವರಿಗೆ ಎಚ್ಚರಿಕೆ ನೀಡಿ, ಮುಂದೆ ಅನಾಹುತವಾದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ ಎನ್ನಲಾಗಿದೆ.