ಶಿಕ್ಷಕರ ವರ್ಗಾವಣೆ ವಿರುದ್ಧ ಆಕ್ರೋಶ: ಶಾಲಾ ಪೀಠೋಪಕರಣ ದ್ವಂಸಗೈದ ಮಕ್ಕಳು
ವಿಡಿಯೋ ವೈರಲ್
ಚಾಮರಾಜನಗರ, ನ.30: ತಮ್ಮ ನೆಚ್ಚಿನ ಶಿಕ್ಷಕ ದಿಢೀರ್ ವರ್ಗಾವಣೆ ಆಗಿರುವುದನ್ನು ತಿಳಿದ ಶಾಲಾ ಮಕ್ಕಳು ಆಕ್ರೋಶ ವ್ಯಕ್ತಪಡಿಸಿ, ಪ್ರತಿಭಟನೆ ನಡೆಸಿರುವ ಘಟನೆ ಜಿಲ್ಲೆಯ ಹನೂರು ತಾಲೂಕಿನ ಮೀಣ್ಯಂನಲ್ಲಿ ನಡೆದಿದೆ.
ಪಿ.ಮಹಾದೇವಸ್ವಾಮಿ ಎಂಬವರನ್ನು ಮೀಣ್ಯಂ ಶಾಲೆಯಿಂದ ಲೊಕ್ಕನಹಳ್ಳಿ ಶಾಲೆಗೆ ದಿಢೀರ್ ಆಗಿ ವರ್ಗಾವಣೆ ಮಾಡಲಾಗಿತ್ತು. ಸುದ್ದಿ ತಿಳಿದ ವಿದ್ಯಾರ್ಥಿಗಳು, ತಮ್ಮ ನೆಚ್ಚಿನ ಶಿಕ್ಷಕರು ಬೇಕೇ ಬೇಕೆಂದು ಘೋಷಣೆಗಳನ್ನು ಕೂಗಿ ಆಕ್ರೋಶ ಹೊರಹಾಕಿದರು. ಗ್ರಾಮಸ್ಥರೂ ಸಹ ಇದಕ್ಕೆ ಧ್ವನಿಗೂಡಿಸಿದ್ದು, ತಮ್ಮ ಶಾಲೆಗೆ ಮಹಾದೇವಸ್ವಾಮಿ ಮತ್ತೆ ನಿಯೋಜನೆ ಆಗದಿದ್ದರೆ ಶನಿವಾರದಿಂದ ಯಾರೂ ಶಾಲೆಗೆ ಬರುವುದಿಲ್ಲ ಎಂದು ಮಕ್ಕಳು ಎಚ್ಚರಿಕೆ ನೀಡಿದ್ದಾರೆ.
ಇನ್ನು ವರ್ಗಾವಣೆಯಾದ ಪಿ.ಮಹಾದೇವಸ್ವಾಮಿ ಕಳೆದ 4 ವರ್ಷದಿಂದ ಮೀಣ್ಯಂ ಶಾಲೆಯಲ್ಲಿದ್ದು, ಕನ್ನಡ, ಇಂಗ್ಲಿಷ್ ಜೊತೆಗೆ ದೈಹಿಕ ಶಿಕ್ಷಣ ಶಿಕ್ಷಕರು ಇಲ್ಲದಿದ್ದರಿಂದ ಅದರ ಜವಾಬ್ದಾರಿಯನ್ನು ಹೊತ್ತಿದ್ದರು. ಇದರೊಟ್ಟಿಗೆ ಬಿಸಿಯೂಟದ ಮೇಲ್ವಿಚಾರಣೆಯನ್ನೂ ವಹಿಸಿಕೊಂಡಿದ್ದರು ಎನ್ನಲಾಗಿದೆ.
ಪಿ.ಮಹಾದೇವಸ್ವಾಮಿ ಅವರ ವರ್ಗಾವಣೆಯಲ್ಲಿ ಮುಖ್ಯ ಶಿಕ್ಷಕ ಬಾಲುನಾಯ್ಕ ಎಂಬವವರರು ಪ್ರಭಾವ ಬೀರಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದು, ಶನಿವಾರ ಇಲ್ಲವೇ, ಭಾನುವಾರ ಪ್ರತಿಭಟನೆ ನಡೆಸಿ ಶಿಕ್ಷಕರನ್ನು ಪುನರ್ ನಿಯೋಜಿಸುವಂತೆ ಒತ್ತಾಯಿಸಲಾಗುವುದು ಎಂದು ಗ್ರಾಮಸ್ಥರು ತಿಳಿಸಿದ್ದಾರೆ.