ಮಡಿಕೇರಿ: ಒತ್ತುವರಿಯಾಗಿದ್ದ ಸರ್ಕಾರಿ ಭೂಮಿ ವಶಕ್ಕೆ ಪಡೆದ ಜಿಲ್ಲಾಡಳಿತ
ಮಳೆಹಾನಿ ಸಂತ್ರಸ್ತರಿಗೆ ನಿವೇಶನ ಹಂಚಲು ನಿರ್ಧಾರ
ಮಡಿಕೇರಿ, ಡಿ.1: ಒತ್ತುವರಿಯಾಗಿರುವ ಸರ್ಕಾರಿ ಭೂಮಿಯ ತೆರವು ಕಾರ್ಯಾಚರಣೆಯನ್ನು ಜಿಲ್ಲಾಡಳಿತ ಚುರುಕುಗೊಳಿಸಿದೆ. ನೆಲ್ಯಹುದಿಕೇರಿ ಭಾಗದಲ್ಲಿ ಒತ್ತುವರಿಯಾಗಿದ್ದ ಸುಮಾರು 7.70 ಎಕರೆ ಪ್ರದೇಶವನ್ನು ಇಂದು ವಶಕ್ಕೆ ಪಡೆಯಲಾಗಿದೆ.
ಕುಜ್ಞಿ ಮುಹಮ್ಮದ್ ಎಂಬುವವರು ಒತ್ತುವರಿ ಮಾಡಿಕೊಂಡಿದ್ದ 6.37 ಎಕರೆ ಮತ್ತು ಟಾಟಾ ಸಂಸ್ಥೆಯ ಅಧೀನದಲ್ಲಿದ್ದ 1.33 ಎಕರೆ ಸರ್ಕಾರಿ ಜಾಗವನ್ನು ಉಪವಿಭಾಗಾಧಿಕಾರಿ ಜವರೇಗೌಡ ಅವರ ನೇತೃತ್ವದ ಅಧಿಕಾರಿಗಳ ತಂಡ ಕಾರ್ಯಾಚರಣೆ ನಡೆಸಿ ವಶಕ್ಕೆ ಪಡೆಯಿತು. ಜೆಸಿಬಿ ಯಂತ್ರಗಳನ್ನು ಬಳಸಿ ಮಾರ್ಗವನ್ನು ನಿರ್ಮಿಸಿ ಗಿಡಗಳ ತೆರವು ಕಾರ್ಯ ನಡೆಸಲಾಯಿತು.
ಈ ಸಂದರ್ಭ ಮಾತನಾಡಿದ ಉಪವಿಭಾಗಾಧಿಕಾರಿ ಜವರೇಗೌಡ ಅವರು ಸರ್ಕಾರಿ ಜಾಗವನ್ನು ಒತ್ತುವರಿ ಮಾಡಿಕೊಂಡಿದ್ದ ಕುಜ್ಞಿ ಮುಹಮ್ಮದ್ ಅವರು ಕಳೆದ ಬಾರಿ ತೆರವು ಕಾರ್ಯಾಚರಣೆ ಆರಂಭಿಸಿದಾಗ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದರು. ಆದರೆ ಜಿಲ್ಲಾಡಳಿತ ಸೂಕ್ತ ದಾಖಲಾತಿಗಳು ಸಲ್ಲಿಸಿದ ಹಿನ್ನೆಲೆ ತಡೆಯಾಜ್ಞೆ ತೆರವಾಗಿದ್ದು, ಮತ್ತೆ ಕಾರ್ಯಾಚರಣೆ ನಡೆಸಿ ಸರ್ಕಾರಿ ಭೂಮಿಯನ್ನು ವಶಕ್ಕೆ ಪಡೆಯಲಾಗುತ್ತಿದೆ ಎಂದರು. ಟಾಟಾ ಸಂಸ್ಥೆಯ ಬಳಿ ಇರುವ ಭೂಮಿಯನ್ನು ಕೂಡ ಜಿಲ್ಲಾಡಳಿತ ವಶಕ್ಕೆ ಪಡೆದಿದೆ ಎಂದು ತಿಳಿಸಿದರು.
ಮಳೆಹಾನಿಯಿಂದ ಸಂಪೂರ್ಣವಾಗಿ ಮನೆ ಕಳೆದುಕೊಂಡವರಿಗೆ ಒತ್ತುವರಿ ತೆರವಾದ ಪ್ರದೇಶದಲ್ಲಿ ಮನೆ ನಿರ್ಮಿಸಲು ಕ್ರಮ ಕೈಗೊಳ್ಳಲಾಗುವುದು. ಇದಕ್ಕೂ ಮೊದಲು ಅರಣ್ಯ ಇಲಾಖೆಯ ಅನುಮತಿ ಪಡೆದು ಇಲ್ಲಿರುವ ಮರಗಳನ್ನು ತೆರವುಗೊಳಿಸಲಾಗುವುದು. ನಂತರ ತಾತ್ಕಾಲಿಕ ಶೆಡ್ಗಳ ನಿರ್ಮಾಣಕ್ಕೆ ಸಂತ್ರಸ್ತರಿಗೆ ಅವಕಾಶ ನೀಡಲಾಗುವುದು. ಮಾಸಿಕ 5 ಸಾವಿರ ರೂ.ಗಳಂತೆ 10 ತಿಂಗಳ ಮನೆ ಬಾಡಿಗೆ ಒಟ್ಟು 50 ಸಾವಿರ ರೂ.ಗಳಲ್ಲಿ 25 ಸಾವಿರವನ್ನು ಒಂದೇ ಕಂತಿನಲ್ಲಿ ನೀಡಲು ಸರ್ಕಾರ ನಿರ್ಧರಿಸಿದೆ. ಈ ಹಣದಿಂದ ಸಂತ್ರಸ್ತರು ತಾತ್ಕಾಲಿಕ ಶೆಡ್ಗಳನ್ನು ನಿರ್ಮಿಸಿಕೊಳ್ಳಬಹುದಾಗಿದೆ ಎಂದು ಉಪವಿಭಾಗಾಧಿಕಾರಿ ತಿಳಿಸಿದರು.
ಜಿಲ್ಲಾಧಿಕಾರಿಗಳ ಸೂಚನೆಯಂತೆ ಒತ್ತುವರಿಯಾದ ಸರ್ಕಾರಿ ಭೂಮಿಯನ್ನು ತೆರವುಗೊಳಿಸಿ ಆ ಪ್ರದೇಶದಲ್ಲಿ ಸಂತ್ರಸ್ತರಿಗೆ ನೆಲೆ ಕಲ್ಪಿಸುವ ಯೋಜನೆಯನ್ನು ಶೀಘ್ರ ಆರಂಭಿಸಲಾಗುವುದೆಂದು ಅವರು ಭರವಸೆ ನೀಡಿದರು. ನೆಲ್ಯಹುದಿಕೇರಿ, ಕರಡಿಗೋಡು, ಬೆಟ್ಟದ ಕಾಡು ಸೇರಿದಂತೆ ಇನ್ನಿತರ ಪ್ರದೇಶಗಳ ಸಂತ್ರಸ್ತರು ಆಶ್ರಯ ಪಡೆಯಲಿದ್ದಾರೆ. ನದಿ ದಂಡೆಯ ನಿರಾಶ್ರಿತ ನಿವಾಸಿಗಳನ್ನು ಶಾಶ್ವತವಾಗಿ ಸ್ಥಳಾಂತರಗೊಳಿಸಲಾಗುವುದು ಎಂದು ಉಪವಿಭಾಗಾಧಿಕಾರಿ ಇದೇ ಸಂದರ್ಭ ತಿಳಿಸಿದರು. ಕಂದಾಯ ಅಧಿಕಾರಿಗಳು ಹಾಗೂ ಗ್ರಾಮಸ್ಥರು ಈ ಸಂದರ್ಭ ಹಾಜರಿದ್ದರು.