ನನ್ನನ್ನು ತುಳಿಯಲು ಯಾರಿಗೂ ಸಾಧ್ಯವಿಲ್ಲ: ಬಿಜೆಪಿ ಶಾಸಕ ಯತ್ನಾಳ್
ಬೆಳಗಾವಿ, ಡಿ. 2: ಉಪಚುನಾವಣೆ ಪ್ರಚಾರದ ವೇಳೆ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಸೇರುವಷ್ಟು ಜನ ನನ್ನ ಕಾರ್ಯಕ್ರಮಕ್ಕೂ ಸೇರಿದ್ದು, ನನ್ನನ್ನು ತುಳಿಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಬಿಜೆಪಿ ಶಾಸಕ ಬಸನಗೌಡಪಾಟೀಲ್ ಯತ್ನಾಳ್ ಹೇಳಿದ್ದಾರೆ.
ಸೋಮವಾರ ಜಿಲ್ಲೆಯ ಕಾಗವಾಡ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶ್ರೀಮಂತ ಪಾಟೀಲ್ ಪರ ಪ್ರಚಾರದ ವೇಳೆ ಮಾತನಾಡಿದ ಅವರು, ನಿನ್ನೆ ತೆಲಸಂಗದಲ್ಲಿ ನನ್ನ ಕಾರ್ಯಕ್ರಮಕ್ಕೆ 3-4 ಸಾವಿರ ಜನ ಸೇರಿದ್ದರು. ಹೀಗಾಗಿ ನಾನೂ ಪ್ರಭಾವಿ ನಾಯಕ ಎಂದು ಹೇಳಿದರು.
ನಾನು ಸಚಿವನಾಗುವುದಿಲ್ಲ ಎನ್ನುವುದು ಬೇರೆ ಮಾತು. ಉತ್ತರ ಕರ್ನಾಟಕದ ಪ್ರವಾಹ ಸಂತ್ರಸ್ತರ ಪರವಾಗಿ ನಿಂತು ಹೋರಾಡುತ್ತೇನೆ ಎಂದ ಅವರು, ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ಮುಂದಿನ ಮೂರೂವರೆ ವರ್ಷದವರೆಗೂ ಯಾರೂ ಅಲುಗಾಡಿಸಲು ಸಾಧ್ಯವಿಲ್ಲ ಎಂದರು.
ಗಂಡಸರು ಎಂದು ತೋರಿಸಿ: ಕಾಗವಾಡ ಕ್ಷೇತ್ರದಲ್ಲಿ ಲಿಂಗಾಯತರು ಜಾತಿಭೇದ ಮಾಡದೆ ಮರಾಠ ಸಮಾಜದ ಶ್ರೀಮಂತ ಪಾಟೀಲ್ ಅವರನ್ನು ಗೆಲ್ಲಿಸಬೇಕು. ಜತೆಗೆ ಅಥಣಿ ಕ್ಷೇತ್ರದಲ್ಲಿ ಮಹೇಶ್ ಕುಮಟಳ್ಳಿ ಅವರನ್ನು ಗೆಲ್ಲಿಸಿ ಗಂಡಸರು ಎಂಬುದನ್ನು ಸಾಬೀತುಪಡಿಸಬೇಕೆಂದು ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಗುಡುಗಿದರು.
ಉಪಚುನಾವಣೆಯಲ್ಲಿ ಮತ ಕೇಳುವ ಬದಲು ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಗಂಡಸುತನದ ಬಗ್ಗೆ ಮಾತನಾಡುತ್ತಾರೆ. ಲಕ್ಷ್ಮಿ ಪಟಾಕಿ ಠುಸ್ ಆದ ಮೇಲೆ ಒಂದು ಎತ್ತು ನಿನ್ನೆ ರಾತ್ರಿ ಓಡಿ ಹೋಗಿದೆ. ಎರಡು ದಿನಗಳಿಂದ ಕುಮಟಳ್ಳಿ ಫುಲ್ಚಾರ್ಜ್ ಆಗಿದ್ದಾರೆ. ಮತ್ತೊಂದೆಡೆ ಇನ್ನೊಬ್ಬರು ಡಿಸ್ಚಾರ್ಜ್ ಆಗಿದ್ದಾರೆಂದು ಯತ್ನಾಳ್ ಲೇವಡಿ ಮಾಡಿದರು.