ಬಿಜೆಪಿ ಅಭ್ಯರ್ಥಿ ಆನಂದ್ ಸಿಂಗ್ ಹಣದ ರಾಜ: ವಿ.ಎಸ್.ಉಗ್ರಪ್ಪ
ಹೊಸಪೇಟೆ, ಡಿ.3: ಬಿಜೆಪಿ ಅಭ್ಯರ್ಥಿ ಆನಂದ್ ಸಿಂಗ್ ಹಣದ ರಾಜನಂತೆ. ಎಲ್ಲವನ್ನು ಖರೀದಿಸುವ ಲೆಕ್ಕಾಚಾರ ಹಾಕಿಕೊಂಡಿದ್ದು, ಚುನಾವಣೆಯಲ್ಲಿ ಮತದಾರರು ಅವರಿಗೆ ಬುದ್ಧಿ ಕಲಿಸಲಿದ್ದಾರೆ ಎಂದು ಮಾಜಿ ಸಂಸದ ವಿ.ಎಸ್.ಉಗ್ರಪ್ಪ ವಾಗ್ದಾಳಿ ನಡೆಸಿದರು.
ಮಂಗಳವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೋಲುವ ಭಯದಲ್ಲಿ ನಾಟಕ ಆರಂಭಿಸಿರುವ ಆನಂದ್ ಸಿಂಗ್, ನಾಮಪತ್ರ ಸಲ್ಲಿಸುವ ವೇಳೆ ಮೀಸೆ ತಿರುವಿ, ತೊಡೆ ತಟ್ಟಿದ್ದರು. ತದನಂತರ, ಹತಾಶರಾಗಿ ಕಣ್ಣೀರು ಹಾಕಿದ್ದಾರೆ ಎಂದು ಹೇಳಿದರು.
ಐಎಸ್ಆರ್ ಸಕ್ಕರೆ ಕಾರ್ಖಾನೆ ಬಂದ್ ಮಾಡಿದ್ದೇ ಆನಂದ್ ಸಿಂಗ್ ದೊಡ್ಡ ಸಾಧನೆ. ಅಷ್ಟೇ ಅಲ್ಲದೆ, ಬಡವರ ಜಮೀನು ಲಪಟಾಯಿಸಿ ಲೇಔಟ್ ಸಹ ಮಾಡಿದ್ದಾರೆ ಎಂದ ಅವರು, ಅಧಿಕಾರಕ್ಕಾಗಿ ತನ್ನ ಶಾಸಕ ಸ್ಥಾನ ಮಾರಿಕೊಂಡಿದ್ದಾರೆ. ಇಂತಹವರು ಪುನಃ ಶಾಸಕರಾಗಬೇಕೇ ಎಂದು ಉಗ್ರಪ್ಪ ಪ್ರಶ್ನಿಸಿದರು.
ಮಾಜಿ ಸಚಿವ ಬಸವರಾಜ ರಾಯರಡ್ಡಿ ಮಾತನಾಡಿ, ಕಾಂಗ್ರೆಸ್ಸಿನ ಸರಳ, ಸಜ್ಜನ, ಪ್ರಾಮಾಣಿಕ ರಾಜಕಾರಣಿ ವೆಂಕಟರಾವ್ ಘೋರ್ಪಡೆಯವರು ಗೆದ್ದರೆ ಪ್ರಜಾಪ್ರಭುತ್ವಕ್ಕೆ ಮೌಲ್ಯ ಬರುತ್ತದೆ. ಆ ಕೆಲಸ ಮತದಾರರು ಮಾಡಲಿದ್ದಾರೆ ಎನ್ನುವ ವಿಶ್ವಾಸ ಇದೆ ಎಂದರು.