ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಎಚ್.ಎಸ್.ವೆಂಕಟೇಶಮೂರ್ತಿ ಆಯ್ಕೆಗೆ ವಿರೋಧ
ಎಚ್.ಎಸ್.ವೆಂಕಟೇಶಮೂರ್ತಿ
ಕಲಬುರ್ಗಿ, ಡಿ.4: 85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇನಾಧ್ಯಕ್ಷರನ್ನಾಗಿ ಎಚ್.ಎಸ್.ವೆಂಕಟೇಶಮೂರ್ತಿಯವರನ್ನು ಆಯ್ಕೆ ಮಾಡಿರುವುದಕ್ಕೆ ಹೋರಾಟಗಾರ ನಾಗಲಿಂಗಯ್ಯ ಮಠಪತಿ ವಿರೋಧ ವ್ಯಕ್ತಪಡಿಸಿದ್ದಾರೆ.
ಕನ್ನಡ ಸಾಹಿತ್ಯ ಪರಿಷತ್ನ ಅಧ್ಯಕ್ಷ ಮನು ಬಳಿಗಾರ್ಗೆ ಹಾಗೂ ಕಾರ್ಯಕಾರಿ ಸಮಿತಿಗೆ ಕಲ್ಯಾಣ ಕರ್ನಾಟಕ ಯಾವೊಬ್ಬ ಸಾಹಿತಿಗಳು ಕಣ್ಣಿಗೆ ಕಾಣಲಿಲ್ಲವೆ. ಈ ಭಾಗದ ಜನಸಾಮಾನ್ಯರ ಸಮಸ್ಯೆಗಳೇನು, ಇಲ್ಲಿನ ಬಹುಸಂಸ್ಕೃತಿಗೆ ಎದುರಾಗಿರುವ ಬಿಕ್ಕಟ್ಟುಗಳೇನು ಎಂಬುದರ ಬಗ್ಗೆ ಅಧಿಕೃತವಾಗಿ ರಾಜ್ಯ, ದೇಶದ ಜನತೆಗೆ ಮನವರಿಕೆ ಮಾಡಿಕೊಡುವಂತಹ ಅವಕಾಶವನ್ನು ಕನ್ನಡ ಸಾಹಿತ್ಯ ಪರಿಷತ್ ಕೈ ತಪ್ಪಿಸಿದೆ. ಬರಗಾಲ ಹಾಗೂ ಜನಪ್ರಳಯದಿಂದಾಗಿ ತತ್ತರಿಸಿರುವ ಕಲ್ಯಾಣ ಕರ್ನಾಟಕ ಜನತೆ ವಲಸೆ ಹೋಗುವಂತಹ ದುಸ್ಥಿತಿಗೆ ತಲುಪಿದ್ದಾರೆ. ಇಂತಹ ಸಂದರ್ಭದಲ್ಲಿ ವೈಭವದ ಕನ್ನಡದ ಜಾತ್ರೆಯನ್ನು ನಡೆಸುವುದು ಅಗತ್ಯವಿದೆಯೇ. ಕೋಟ್ಯಂತರ ರೂ.ಖರ್ಚು ಮಾಡಿ ಸಮ್ಮೇಳನ ಮಾಡುವುದು ಈ ಭಾಗದ ಜನತೆಗೆ ಮಾಡುವ ಅವಮಾನವಾಗಿದೆ.
ಕನ್ನಡ ಸಾಹಿತ್ಯ ಪರಿಷತ್ಗೆ ನಿಜವಾಗಿಯೇ ಅಖಂಡ ಕರ್ನಾಟಕ ಭಾಗದ ಜನತೆಯ ಮೇಲೆ ಕಾಳಜಿ ಇದ್ದರೆ, ಈ ಬಾರಿಯ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಸ್ಥಾನಕ್ಕೆ ಸ್ಥಳೀಯ ಸಾಹಿತಿಯೊಬ್ಬರನ್ನು ಆಯ್ಕೆ ಮಾಡಬೇಕು. ಸರಳವಾಗಿ ಆಚರಿಸುವುದಕ್ಕೆ ಆದ್ಯತೆ ನೀಡಬೇಕೆಂದು ಪತ್ರಿಕಾ ಪ್ರಕಟನೆಯಲ್ಲಿ ಒತ್ತಾಯಿಸಿದ್ದಾರೆ.