ಸೋಲಿನ ಭೀತಿಯಲ್ಲಿ ಎಂಟಿಬಿ ನಾಗರಾಜ್ ?: ಸಂಸದ ಬಚ್ಚೇಗೌಡ ವಿರುದ್ಧ ಸಿಎಂಗೆ ದೂರು
ಬೆಂಗಳೂರು, ಡಿ. 7: ಹೊಸಕೋಟೆ ಕ್ಷೇತ್ರದ ಉಪಚುನಾವಣೆಯ ಬಿಜೆಪಿ ಅಭ್ಯರ್ಥಿ ಹಾಗೂ ಅನರ್ಹ ಶಾಸಕ ಎಂಟಿಬಿ ನಾಗರಾಜ್ ಸೋಲಿನ ಭೀತಿ ಹಿನ್ನೆಲೆಯಲ್ಲಿ ಸಂಸದ ಬಿ.ಎನ್.ಬಚ್ಚೇಗೌಡ ವಿರುದ್ಧ ಮುಖ್ಯಮಂತ್ರಿ ಯಡಿಯೂರಪ್ಪ ದೂರು ನೀಡಿದ್ದಾರೆ.
ಶನಿವಾರ ಇಲ್ಲಿನ ಡಾಲರ್ಸ್ ಕಾಲನಿಯಲ್ಲಿನ ಸಿಎಂ ಧವಳಗಿರಿ ನಿವಾಸದಲ್ಲಿ ಬಿಎಸ್ವೈ ಅವರನ್ನು ಭೇಟಿ ಮಾಡಿದ ಎಂ.ಟಿ.ಬಿ. ನಾಗರಾಜ್, ಪಕ್ಷೇತರ ಅಭ್ಯರ್ಥಿ ಶರತ್ ಬಚ್ಚೇಗೌಡಗೆ ಸಂಸದ ಬಚ್ಚೇಗೌಡ ಬೆಂಬಲ ನೀಡಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದ್ದಾರೆಂದು ಗೊತ್ತಾಗಿದೆ.
ಸಂಸದ ಬಚ್ಚೇಗೌಡ ಪಕ್ಷದ ಅಭ್ಯರ್ಥಿಯನ್ನು ಬೆಂಬಲಿಸದೆ ತಮ್ಮ ಪುತ್ರ ಶರತ್ಗೆ ಬೆಂಬಲ ನೀಡಿರುವ ಹಿನ್ನೆಲೆಯಲ್ಲಿ ಕ್ಷೇತ್ರದಲ್ಲಿ ವ್ಯತಿರಿಕ್ತ ಫಲಿತಾಂಶ ಬರುವ ಸಾಧ್ಯತೆಗಳಿವೆ ಎಂದು ಎಂಟಿಬಿ ನಾಗರಾಜ್, ಯಡಿಯೂರಪ್ಪರ ಮುಂದೆ ತಮ್ಮ ಆಳಲನ್ನು ತೋಡಿಕೊಂಡಿದ್ದಾರೆಂದು ಮೂಲಗಳು ತಿಳಿಸಿವೆ.
ಎಂಟಿಬಿ ನಾಗರಾಜ್ ಅವರ ಆಳಲನ್ನು ಕೇಳಿದ ಯಡಿಯೂರಪ್ಪ, ಕ್ಷೇತ್ರದ ಉಸ್ತುವಾರಿಗಳು ನೀವು ನಿಶ್ಚಿತವಾಗಿಯೂ ಗೆಲ್ಲಲಿದ್ದೀರಿ ಎಂದು ಮಾಹಿತಿ ನೀಡಿದ್ದಾರೆ. ಹೀಗಾಗಿ ನೀವು ಆತಂಕಪಡುವ ಅಗತ್ಯವಿಲ್ಲ. ಫಲಿತಾಂಶದ ಬಳಿಕ ಮುಂದಿನ ಕ್ರಮ ಬಗ್ಗೆ ಆಲೋಚಿಸುತ್ತೇವೆ ಎಂದು ಸಮಾಧಾನ ಮಾಡಿದ್ದಾರೆಂದು ಹೇಳಲಾಗಿದೆ.