ಮಂಡ್ಯದಲ್ಲಿ ಅರಳಿದ ಕಮಲ: ಕೆ.ಆರ್.ಪೇಟೆಯಲ್ಲಿ ನಾರಾಯಣ ಗೌಡರಿಗೆ ಗೆಲುವು
ಮಂಡ್ಯ, ಡಿ.9: ತವರು ಜಿಲ್ಲೆಯಲ್ಲಿ ಕಮಲ ಅರಳಿಸುವ ಚಾಲೆಂಜ್ನಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ವಿಜಯಿ ಆಗಿದ್ದು, ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ಬಿಜೆಪಿ ಖಾತೆ ತೆರೆಯುವ ಮೂಲಕ ಇತಿಹಾಸ ನಿರ್ಮಿಸಿದೆ.
ಕೆ.ಆರ್.ಪೇಟೆ ವಿಧಾನಸಭಾ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಕೆ.ಸಿ.ನಾರಾಯಣಗೌಡ ಜಯಗಳಿಸಿದ್ದು, ಯಡಿಯೂರಪ್ಪ ಅವರಿಗೆ ತಾಲೂಕಿನ ಮತದಾರರು ತವರಿನ ಉಡುಗೊರೆ ನೀಡಿದ್ದಾರೆ. ಜೆಡಿಎಸ್ನಲ್ಲಿ ರಾಜಕೀಯ ನೆಲೆಕಂಡುಕೊಂಡು ಅನರ್ಹ ಶಾಸಕ ಪಟ್ಟ ಕಟ್ಟಿಕೊಂಡು ಬಿಜೆಪಿ ತೆಕ್ಕೆಗೆ ಜಾರಿದ ನಾರಾಯಣಗೌಡ, ಜಯಗಳಿಸುವ ಮೂಲಕ ಜೆಡಿಎಸ್ ಭದ್ರಕೋಟೆಯನ್ನು ಅಲುಗಾಡಿಸಿದ್ದಾರೆ. ಜೆಡಿಎಸ್ನಿಂದ ಸತತ ಎರಡು ಬಾರಿ ಮತ್ತು ಬಿಜೆಪಿಯಿಂದ ಉಪಚುನಾವಣೆಯಲ್ಲಿ ಪ್ರಥಮ ಬಾರಿ ಜಯಗಳಿಸಿದ ನಾರಾಯಣಗೌಡ ಹ್ಯಾಟ್ರಿಕ್ ಸಾಧನೆ ಮಾಡಿದರೆ, ಕಾಂಗ್ರೆಸ್ನ ಕೆ.ಬಿ.ಚಂದ್ರಶೇಖರ್ ಅವರದು ಹ್ಯಾಟ್ರಿಕ್ ಸೋಲು.
ತೀವ್ರ ಕುತೂಹಲ ಕೆರಳಿಸಿದ್ದ ಚುನಾವಣೆಯಲ್ಲಿ ನಾರಾಯಣಗೌಡ 66,087 ಮತಗಳನ್ನು ಪಡೆದು ಸಮೀಪ ಸ್ಪರ್ಧಿ ಜೆಡಿಎಸ್ನ ಬಿ.ಎಲ್.ದೇವರಾಜು ವಿರುದ್ಧ 9,723 ಮತಗಳ ಅಂತರದಿಂದ ಗೆಲುವಿನ ನಗೆಬೀರಿದರು. ದೇವರಾಜು ಅವರಿಗೆ 56,363 ಮತಗಳು ಬಂದರೆ, ಕಾಂಗ್ರೆಸ್ನ ಕೆ.ಬಿ.ಚಂದ್ರಶೇಖರ್ ಗೆ 41,665 ಮತಗಳು ಬಂದಿವೆ. ಕಣದಲ್ಲಿದ್ದ ನಾಲ್ವರು ಪಕ್ಷೇತರ ಅಭ್ಯರ್ಥಿಗಳ ಪೈಕಿ ಚಂದ್ರೇಗೌಡರಿಗೆ ಹೆಚ್ಚು ಅಂದರೆ, 1,020 ಮಗಳು ಲಭಿಸಿವೆ.
ಪ್ರಾರಂಭದ ಮೂರು ಸುತ್ತಿನಲ್ಲಿ ಜೆಡಿಎಸ್ ಮುನ್ನಡೆ ಕಾಯ್ದುಕೊಂಡಿತ್ತಾದರೂ, ನಂತರದ ಎಲ್ಲ ಸುತ್ತಿನಲ್ಲೂ ಬಿಜೆಪಿ ಮುನ್ನಡೆ ಕಾಯ್ದುಕೊಂಡು ತನ್ನ ಅಂತರವನ್ನು ಹೆಚ್ಚಿಸಿಕೊಂಡು ಗೆಲುವಿನ ದಡ ಸೇರಿತು.
ಬಿಜೆಪಿ ನಾಯಕರು ಕ್ಷೇತ್ರದ ಗೆಲುವಿಗೆ ಹೆಣೆದ ತಂತ್ರಕ್ಕೆ ಜೆಡಿಎಸ್, ಕಾಂಗ್ರೆಸ್ನ ಹಲವು ಮುಖಂಡರು ಬಿಜೆಪಿಗೆ ಜಿಗಿದಿದ್ದಲ್ಲದೆ, ಉಪಮುಖ್ಯಮಂತ್ರಿ ಡಾ.ಅಶ್ವಥ್ ನಾರಾಯಣ, ಹಾಸನ ಶಾಸಕ ಪ್ರೀತಂಗೌಡ, ಯಡಿಯೂರಪ್ಪ ಪುತ್ರ ವಿಜಯೇಂದ್ರ ಕ್ಷೇತ್ರದಲ್ಲೇ ಠಿಕಾಣಿ ಹೂಡಿ ತಂತ್ರ ಯಶಸ್ವಿಗೊಳಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.
ನಾರಾಯಣಗೌಡ ವಿಜಯ ಪತಾಕೆ ಹಾರಿಸುತ್ತಿದ್ದಂತೆ ಬಿಜೆಪಿ ಕಾರ್ಯಕರ್ತರು, ಅಭಿಮಾನಿಗಳು ನಾರಾಯಣಗೌಡರ ಮನೆಯ ಮುಂದೆ ಪಟಾಕಿ ಸಿಡಿಸಿ, ಕುಣಿದು ಕುಪ್ಪಳಿಸಿ ಸಂಭ್ರಮ ಆಚರಿಸಿದರು. ಪತ್ನಿ ದೇವಕಿ, ಪುತ್ರಿ ಲೀನಾಕರಣ್ ಮತ್ತು ಬೆಂಬಲಿಗರ ಜತೆ ಮತ ಎಣಿಕಾ ಕೇಂದ್ರಕ್ಕೆ ತೆರಳಿ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್, ಚುನಾವಣಾಧಿಕಾರಿ ಎಚ್.ಕೆ.ಕೃಷ್ಣಮೂರ್ತಿ ಅವರಿಂದ ಪ್ರಮಾಣಪತ್ರ ಸ್ವೀಕರಿಸಿದರು.