ಸುಲಿಗೆ ಪ್ರಕರಣ: ನಾಲ್ವರ ಬಂಧನ, 9 ಲಕ್ಷ ರೂ. ಮೌಲ್ಯದ ಮಾಲು ಜಪ್ತಿ
ಬೆಳಗಾವಿ, ಡಿ.10: ಸುಲಿಗೆ ಸೇರಿದಂತೆ ಗಂಭೀರ ಆರೋಪ ಪ್ರಕರಣ ಸಂಬಂಧ ನಾಲ್ವರನ್ನು ಬಂಧಿಸಿರುವ ಇಲ್ಲಿನ ಮಾರಿಹಾಳ ಠಾಣಾ ಪೊಲೀಸರು, ಆಟೊ, ಐದು ಬೈಕ್ ಸೇರಿದಂತೆ ಒಟ್ಟು 9 ಲಕ್ಷ ರೂ. ಮೌಲ್ಯದ ಮಾಲು ಜಪ್ತಿ ಮಾಡಿ, 10 ಪ್ರಕರಣಗಳನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.
ಬೆಳಗಾವಿಯ ವಾಲ್ಮೀಕಿ ನಗರದ ರಾಮಪ್ಪ(20), ಬಸ್ಸಪ್ಪ(21), ಸಂತೋಷ್(23) ಹಾಗೂ ಸುನೀಲ್(28) ಬಂಧಿತ ಆರೋಪಿಗಳೆಂದು ಬೆಳಗಾವಿ ಎಸಿಪಿ ಕೆ.ಶಿವಾರೆಡ್ಡಿ ತಿಳಿಸಿದ್ದಾರೆ.
ಡಿ.8ರಂದು ಇಲ್ಲಿನ ಕಬಲಾಪೂರ ಬಳಿಕ ಗೋಕಾಕ-ಬೆಳಗಾವಿ ಮಾರ್ಗದ ರಸ್ತೆಯಲ್ಲಿ ಕೆಲವರು ಸಾರ್ವಜನಿಕರನ್ನು ಮಾರಕಾಸ್ತ್ರಗಳಿಂದ ಬೆದರಿಸಿ, ಸುಲಿಗೆ ಮಾಡುತ್ತಿರುವ ಬಗ್ಗೆ ಮಂಜುನಾಥಸ್ವಾಮಿ ದೇಗಾವಿಮಠ ಎಂಬುವರು ನೀಡಿದ ದೂರಿನ್ವಯ ಕಾರ್ಯಾಚರಣೆ ನಡೆಸಿದ ಪೊಲೀಸರು, ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಪಿಗಳ ವಿರುದ್ಧ ವಿವಿಧ ಪೊಲೀಸ್ ಠಾಣೆಗಳಲ್ಲಿ ಮೊಕದ್ದಮೆ ದಾಖಲಾಗಿದ್ದು, ತನಿಖೆ ಮುಂದುವರೆಸಲಾಗಿದೆ. ಆರೋಪಿಗಳ ಪತ್ತೆಗೆ ಶ್ರಮಿಸಿದ ಮಾರಿಹಾಳ ಠಾಣಾ ತನಿಖಾಧಿಕಾರಿಗಳಿಗೆ ಬೆಳಗಾವಿ ನಗರ ಪೊಲೀಸ್ ಆಯುಕ್ತರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.