ತೊಗರಿಗೆ ಬೆಂಬಲ ಬೆಲೆ ಶೀಘ್ರ ನಿಗದಿ: ಡಿಸಿಎಂ ಗೋವಿಂದ ಕಾರಜೋಳ
ಕಲಬುರಗಿ, ಡಿ. 12: ರೈತರಿಗೆ ಅನ್ಯಾಯವಾಗದಂತೆ ತೊಗರಿ ಬೆಳೆಗೆ ಬೆಂಬಲ ಬೆಲೆ ನಿಗದಿ ಕುರಿತು ಸಂಬಂಧಿಸಿದ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ, ಶೀಘ್ರವೇ ಕ್ರಮ ಕೈಗೊಳ್ಳಲಾಗುವುದು ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಭರವಸೆ ನೀಡಿದ್ದಾರೆ.
ಗುರುವಾರ ನಗರದಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಮಾತನಾಡಿದ ಅವರು, ತೊಗರಿಗೆ ಬೆಂಬಲ ಬೆಲೆಯನ್ನು ಕೇಂದ್ರ ಸರಕಾರ ನಿರ್ಧರಿಸುತ್ತದೆ. ಬೆಂಬಲ ಬೆಲೆಯಿಂದ ರೈತರಿಗೆ ನಷ್ಟವಾದರೆ ರಾಜ್ಯ ಸರಕಾರವು ಪ್ರೋತ್ಸಾಹ ಧನ ನೀಡಲಿದೆ ಎಂದು ಹೇಳಿದರು.
ಕನ್ನಡ ಸಾಹಿತ್ಯ ಸಮ್ಮೇಳನವನ್ನು ಅರ್ಥಪೂರ್ಣ ಹಾಗೂ ಅದ್ದೂರಿಯಾಗಿ ಆಚರಿಸಲಾಗುವುದು. ಸಾಹಿತ್ಯ ಸಮ್ಮೇಳನವು ಅಪರೂಪದ ಕಾರ್ಯಕ್ರಮ. ಇದು ಕನ್ನಡ ಸಾಹಿತ್ಯ ಜಾತ್ರೆಯಾಗಿದ್ದು, ಇದು ಕನ್ನಡ ಭಾಷೆ ಉಳಿಸಿ ಬೆಳೆಸಲು ಪ್ರೋತ್ಸಾಹಿಸುವ ಕಾರ್ಯಕ್ರಮ ಎಂದರು.
ಸಮ್ಮೇಳನ ಸಂಬಂಧ ಪೂರ್ವಭಾವಿ ಸಭೆ ನಡೆಸಿ, ವಿವಿಧ ಉಪಸಮಿತಿ ರಚಿಸಿ, ಕೆಲಸ-ಕಾರ್ಯಗಳನ್ನು ಪ್ರಾರಂಭಿಸಲಾಗುವುದು. ವಿಶೇಷ ಮುತುವರ್ಜಿಯಿಂದ ಆಚರಿಸಲಾಗುವುದು. ಈ ಹಿಂದೆ ತಮ್ಮ ನೇತೃತ್ವದಲ್ಲಿ ಸಾಹಿತ್ಯ ಸಮ್ಮೇಳನ ಹಾಗೂ ವಿಶ್ವ ಕನ್ನಡ ಸಮ್ಮೇಳನ ಯಶಸ್ವಿಯಾಗಿ ನಡೆದು, ಇತಿಹಾಸದಲ್ಲಿ ದಾಖಲೆಯಾಗಿದೆ ಎಂದು ಅವರು ಸ್ಮರಿಸಿದರು.