ಲೇಖಕಿ, ಕವಯಿತ್ರಿ ಸುನಿತಾಗೆ ಕೊಡಗಿನ ಗೌರಮ್ಮ ದತ್ತಿ ಪ್ರಶಸ್ತಿ
ಮಡಿಕೇರಿ, ಡಿ.14: ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಮಹಿಳಾ ಲೇಖಕಿಯರಿಗಾಗಿ ಕೊಡಮಾಡುವ ಪ್ರತಿಷ್ಠಿತ ಕೊಡಗಿನ ಕತೆಗಾರ್ತಿ ಕೊಡಗಿನ ಗೌರಮ್ಮ ದತ್ತಿ ಪ್ರಶಸ್ತಿ ಈ ಬಾರಿ ಕುಶಾಲನಗರದ ಲೇಖಕಿ, ಕವಯತ್ರಿ ಕೆ.ಕೆ. ಸುನಿತಾ ಅವರಿಗೆ ಲಭಿಸಿದೆ.
ಪರಿಷತ್ತಿನ ಆಹ್ವಾನದ ಮೇರೆ ಪ್ರಶಸ್ತಿಗೆ ವಿವಿಧ ಲೇಖಕಿಯರಿಂದ ಒಟ್ಟು ಐದು ಪುಸ್ತಕಗಳು ಬಂದಿದ್ದವು. ಈ ಪೈಕಿ ಸುನಿತಾ ಅವರ 'ನೆನಪಿನ ಹೆಜ್ಜೆಗೆ ಗೆಜ್ಜೆಯ ಕಟ್ಟಿ' ಕಥಾ ಸಂಕಲನ ಪ್ರಶಸ್ತಿಗೆ ಆಯ್ಕೆಯಾಗಿದೆ. ಸುನಿತಾ ಹಲವಾರು ಕೃತಿಗಳನ್ನು ರಚಿಸಿದ್ದು, ಕತೆ, ಕವನಗಳನ್ನು ರಚಿಸುತ್ತಾರೆ. ರಂಗಸಮುದ್ರ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿಯಾಗಿರುವ ಸುನಿತಾ ಜಿಲ್ಲೆಯ ಬೆರಳೆಣಿಕೆಯ ಅನುವಾದ ಸಾಹಿತಿಗಳಲ್ಲಿ ಒಬ್ಬರಾಗಿದ್ದಾರೆ. ದತ್ತಿ ಪ್ರಶಸ್ತಿಯ ತೀರ್ಪುಗಾರರಾಗಿ ಹಿರಿಯ ಸಾಹಿತಿಗಳಾದ ಕಣಿವೆ ಭಾರಧ್ವಾಜ ಆನಂದತೀರ್ಥ, ಕಿಗ್ಗಾಲು ಗಿರೀಶ್, ಡಾ.ಕೋರನ ಸರಸ್ವತಿ ಅವರುಗಳು ಕಾರ್ಯನಿರ್ವಹಿಸಿದ್ದಾರೆ.
ಪ್ರಶಸ್ತಿ ವಿತರಣಾ ಸಮಾರಂಭ ತಾ.28ರಂದು ಮಡಿಕೇರಿಯ ಅರಸು ಭವನದಲ್ಲಿ ನಡೆಯಲಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಪ್ರಕಟಣೆ ತಿಳಿಸಿದೆ.