ಕಣ್ಣಿನ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದ ಬಾಲಕ ಅನುಮಾನಾಸ್ಪದ ಸಾವು
ಸಾವಿಗೆ ವೈದ್ಯರೇ ಕಾರಣ ಎಂದ ಪಾಲಕರು; ವೈದ್ಯ ಪೊಲೀಸ್ ವಶಕ್ಕೆ
ಬೆಂಗಳೂರು, ಡಿ.15: ಕಣ್ಣಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಬಾಲಕ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಹೆಸರ ಘಟ್ಟದಲ್ಲಿ ನಡೆದಿದೆ ಎಂದು ವರದಿಯಾಗಿದೆ.
ತಮಿಳುನಾಡಿನ ಧರ್ಮಪುರಿ ಮೂಲದ ಸೆಲ್ವರಾಜ್ ಹಾಗೂ ಶುಭ ದಂಪತಿ ಪುತ್ರ ಶಂಕರ್(6) ಮೃತಪಟ್ಟ ಎಂದು ಬಾಗಲಗುಂಟೆ ಠಾಣಾ ಪೊಲೀಸರು ತಿಳಿಸಿದ್ದಾರೆ.
ಬಾಲಕ ಶಂಕರ್ಗೆ ಬಲಗಣ್ಣಿನ ರೆಟಿನಾದಲ್ಲಿ ಸಮಸ್ಯೆ ಕಾಣಿಸಿಕೊಂಡ ಪರಿಣಾಮ ಡಿ.14ರಂದು ಇಲ್ಲಿನ ಹೆಸರಘಟ್ಟ ವ್ಯಾಪ್ತಿಯಲ್ಲಿನ ಮಂಜುನಾಥ ಕಣ್ಣಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಮುಗಿಸಿ, ಸಾಮಾನ್ಯ ರೋಗಿಗಳ ವಾರ್ಡ್ಗೆ ದಾಖಲಿಸುವ ವೇಳೆ ಉಸಿರಾಟದ ತೊಂದರೆಯಿಂದ ಬಾಲಕ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ.
ಅತಿಯಾದ ಅನಾಸ್ತೇಶಿಯಾದಿಂದ ಬಾಲಕ ಸಾವನಪ್ಪಿದ್ದಾನೆ ಎಂದು ಹೇಳಲಾಗಿದೆ. ಬಾಲಕನ ಸಾವಿಗೆ ವೈದ್ಯರೇ ಕಾರಣ ಎಂದು ಪಾಲಕರು ದೂರಿದ್ದಾರೆ. ಹೀಗಾಗಿ ವೈದ್ಯ ಡಾ.ಮಂಜುನಾಥ್ ಎಂಬುವರನ್ನು ಬಾಗಲಗುಂಟೆ ಠಾಣಾ ಪೋಲಿಸರು ವಶಕ್ಕೆ ಪಡೆದು ತನಿಖೆ ಕೈಗೊಂಡಿದ್ದಾರೆ.
Next Story