ಮೌಢ್ಯ: ಸೂರ್ಯಗ್ರಹಣದ ಸಂದರ್ಭ ಮಕ್ಕಳನ್ನು ತಿಪ್ಪೆಯಲ್ಲಿ ಹೂತರು!
ಕಲಬುರಗಿ, ಡಿ.26: ಸೂರ್ಯಗ್ರಹಣ ಖಗೋಳ ಕೌತುಕವಾಗಿದ್ದರೂ ಜನರಲ್ಲಿ ಈ ಬಗ್ಗೆ ಮೂಡನಂಬಿಕೆಗಳು ಮನೆಮಾಡಿವೆ ಎನ್ನುವುದಕ್ಕೂ ಸಾಕ್ಷಿಯಾಗಿದೆ ಮಕ್ಕಳನ್ನು ಕುತ್ತಿಗೆಯವರೆಗೆ ತಿಪ್ಪೆಯಲ್ಲಿ ಹೂಳುವ ಕ್ರಮ.
ಸೂರ್ಯಗ್ರಹಣದ ಹಿನ್ನೆಲೆಯಲ್ಲಿ ಬೆಳಗ್ಗೆಯಿಂದ ಮೋಡ ಮುಸುಕಿದಂತಹ ವಾತಾವರಣ ಕಂಡುಬರುತ್ತಿತ್ತು. ಈ ಸಂದರ್ಭ ನಗರದ ಹೊರವಲಯದ ಗಾಝ್ ಸುಲ್ತಾನಪುರ ಗ್ರಾಮದ ಹೊಲವೊಂದರಲ್ಲಿ ತಮ್ಮ ಮಕ್ಕಳನ್ನು ತಿಪ್ಪೆಯಲ್ಲಿ ಕುತ್ತಿಗೆಯವರೆಗೆ ಹೂತಿಟ್ಟು ಗ್ರಹಣ ಮುಗಿಯುವವರೆಗೆ ಕಾವಲು ಕಾಯುತ್ತಿದ್ದ ದೃಶ್ಯಗಳು ಕಂಡುಬಂದವು. ಈ ರೀತಿ ಮಾಡುವುದರಿಂದ ಮಕ್ಕಳು ಆರೋಗ್ಯಂತರಾಗುತ್ತಾರೆ ಎಂಬ ಮೂಢನಂಬಿಕೆಯೇ ಇದಕ್ಕೆ ಕಾರಣ.
ಅಂಗವೈಕಲ್ಯ ಸೇರಿದಂತೆ ಅನಾರೋಗಕ್ಕೀಡಾಗಿರುವ ಮಕ್ಕಳನ್ನು ಸೂರ್ಯಗ್ರಹಣದ ಸಂದರ್ಭ ತಿಪ್ಪೆಯಲ್ಲಿ ಈ ರೀತಿ ಹೂತರೆ ಅಂಗವೈಕಲ್ಯ ನಿವಾರಣೆಯಾಗಬಲ್ಲುದು ಎಂಬುದು ಇಲ್ಲಿನ ಜನರ ನಂಬಿಕೆ. ಈ ರೀತಿಯ ಮೂಢನಂಬಿಕೆಯಿಂದ ಮಕ್ಕಳು ತೀವ್ರ ಸಂಕಷ್ಟಕ್ಕೀಡಾದರು. ಬೇಸಿಗೆಯ ಸಂದರ್ಭ ಕುತ್ತಿಗೆಯವರೆಗೆ ಹೂಳಲ್ಪಟ್ಟ ಮಕ್ಕಳು ಜೋರಾಗಿ ಅಳುತ್ತಿದ್ದವು.
ಗ್ರಹಣದ ಹಿನ್ನೆಲೆಯಲ್ಲಿ ಈ ಊರಿನಲ್ಲಿ ಅಘೋಷಿತ ಕರ್ಫ್ಯೂ ವಿಧಿಸಿದಂತಿತ್ತು. ಯಾರೊಬ್ಬರೂ ಮನೆಯಿಂದ ಹೊರಗಡೆ ಬರುತ್ತಿರಲಿಲ್ಲ.