ಸಮಾಜದ ಏಳಿಗೆಗೆ ಶ್ರಮಿಸಿದ ಪೇಜಾವರ ಶ್ರೀ: ಸಚಿವ ಬಿ.ಶ್ರೀರಾಮುಲು
ಕೊಪ್ಪಳ, ಡಿ.29: ನನಗೆ ಪೇಜಾವರ ಶ್ರೀಗಳು ಸದಾ ಮಾರ್ಗದರ್ಶಕರಾಗಿದ್ದರು. ಸಮಾಜದ ಏಳಿಗೆಗೆ ಶ್ರಮಿಸಿದ ಅವರು, ದಲಿತರ ಕೇರಿಗಳಿಗೆ ಹೋಗಿ ಸಹಪಂಕ್ತಿ ಭೋಜನ ಮಾಡಿದ್ದರು. ದಲಿತ ಕೇರಿಗಳಲ್ಲಿ ಪಾದಯಾತ್ರೆ ಮಾಡಿ ಜಾತಿ, ಮತ ಧರ್ಮವನ್ನ ತೊಲಗಿಸುವ ಪ್ರಯತ್ನ ಮಾಡಿದ್ದರು ಎಂದು ಸಚಿವ ಬಿ.ಶ್ರೀರಾಮುಲು ಹೇಳಿದರು.
ರವಿವಾರ ನಗರದಲ್ಲಿ ಶಾರದಾ ಉತ್ಸವ ಉದ್ಘಾಟಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದೇ ವೇಳೆ ಶ್ರೀಗಳ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ, ಒಂದು ನಿಮಿಷದ ಮೌನಾಚಾರಣೆ ನಡೆಸಿದರು.
ಪೇಜಾವರ ಶ್ರೀಗಳು ಹಾಗೂ ನನ್ನ ನಡುವೆ ಉತ್ತಮ ಬಾಂಧವ್ಯ ಇತ್ತು. ಒಮ್ಮೆ 2014ರ ಲೋಕಸಭೆ ಚುನಾವಣೆ ವೇಳೆ ಹೊಸಪೇಟೆಯಲ್ಲಿ ರಸ್ತೆಯಲ್ಲೆ ಸಿಕ್ಕಿದ್ದರು. ಅಲ್ಲಿ ಮಾತನಾಡಿ, ಆಶೀರ್ವಾದ ಮಾಡಿ ಹೋಗಿದ್ದರು ಎಂದು ಅವರು ಹೇಳಿದರು.
ನಾವು ಜನಪ್ರತಿನಿಧಿಗಳು, ನಮಗೆ ವಿಮಾನದಲ್ಲಿ ಪ್ರಯಾಣ ಮಾಡಲು ಕ್ಲಾಸ್ ಒನ್ ವ್ಯವಸ್ಥೆ ಟಿಕೆಟ್ ಇರುತ್ತೆ. ವಿಮಾನದಲ್ಲಿ ಒಮ್ಮೆ ಹೋಗುವಾಗ ಶ್ರೀಗಳು ಹಿಂದೆ ಕೂತಿದ್ದರು. ಆಗ ನನ್ನ ನೋಡಿ ಮಾತನಾಡಿಸಿದ ಸಂದರ್ಭದಲ್ಲಿ ನಾನು ನನ್ನ ಸೀಟಿನಲ್ಲಿ ಮುಂದೆ ಕೂರಿಸಿದ್ದೆ. ಅವರ ಸೀಟಿನಲ್ಲಿ ನಾನು ಕೂತು ಪ್ರಯಾಣ ಮಾಡಿದ್ದೆ ಎಂದು ಶ್ರೀರಾಮುಲು ಸ್ಮರಿಸಿಕೊಂಡರು.
ಹಿಂದೂ ಮುಸ್ಲಿಮರಲ್ಲಿ ಭಾವೈಕ್ಯತೆ ಬಿತ್ತುವ ಸಲುವಾಗಿ ಇಫ್ತಾರ್ ಕೂಟ ಆಯೋಜಿಸಿದ್ದರು. ಈ ದೇಶದ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ 1977 ರಲ್ಲಿ ಅಂದಿನ ಪ್ರಧಾನಿ ಇಂದಿರಾಗಾಂಧಿ ವಿರುದ್ಧವೇ ಧ್ವನಿ ಎತ್ತಿದವರು ಪೇಜಾವರ ಶ್ರೀಗಳು ಎಂದು ಶ್ರೀರಾಮುಲು ತಿಳಿಸಿದರು.
ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಮಾಡುವ ಬಗ್ಗೆ ಕೂಡ ಧ್ವನಿ ಎತ್ತಿದ್ದ ಶ್ರೀಗಳು, ಸಿದ್ಧಗಂಗಾ ಶ್ರೀ, ಪಂಡಿತ್ ಪುಟ್ಟರಾಜ ಗವಾಯಿಗಳ ರೀತಿಯಲ್ಲಿ ಹಿರಿಮೆಯನ್ನು ಹೊಂದಿದ್ದರು. ಅವರ ಮಾರ್ಗದರ್ಶನದಲ್ಲಿ ನಾವು ಸದಾ ನಡೆಯಬೇಕು ಎಂದು ಶ್ರೀರಾಮುಲು ಹೇಳಿದರು.