ನೆರೆ ಪರಿಹಾರ ಬಿಡುಗಡೆ ಮಾಡಿ ಎಂದ ಬಿಎಸ್ವೈ: ಸಿಎಂ ಮನವಿಗೆ ಸ್ಪಂದಿಸದ ಪ್ರಧಾನಿ ಮೋದಿ
ತುಮಕೂರು, ಜ.2: ಕರ್ನಾಟಕದಲ್ಲಿ ನೆನೆಗುದಿಗೆ ಬಿದ್ದ ನೀರಾವರಿ ಯೋಜನೆಗಳ ಅನುಷ್ಠಾನಕ್ಕೆ 50 ಸಾವಿರ ಕೋಟಿ ರೂ. ವಿಶೇಷ ಅನುದಾನ ಬಿಡುಗಡೆಗೆ ಪ್ರಧಾನಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮನವಿ ಮಾಡಿದ್ದಾರೆ.
ಇಂದು ತುಮಕೂರು ಕೃಷಿ ಕರ್ಮಣ್ಯೆ ಪ್ರಶಸ್ತಿ ವಿತರಣೆಗೆ ಅಗಮಿಸಿದ್ದ ಪ್ರಧಾನಿಗೆ ಮನವಿ ಮಾಡಿದ ಸಿಎಂ ಅವರು, ರಾಜ್ಯದಲ್ಲಿ 1966 ರಿಂದಲೂ ಕೈಗೊಂಡ ನೀರಾವರಿ ಯೋಜನೆಗಳು ನೆನೆಗುದಿಗೆ ಬಿದ್ದಿವೆ. ಇವುಗಳು ಪೂರ್ಣಗೊಂಡರೆ 2022ಕ್ಕೆ ರೈತರ ಅದಾಯ ದ್ವಿಗುಣಗೊಳ್ಳಬೇಕು ಎಂಬ ನಿಮ್ಮ ಕನಸು ನನಸಾಗಲಿದೆ ಎಂದು ಹೇಳಿದರು.
ಕಳೆದ ವರ್ಷ ರಾಜ್ಯದ 150ಕ್ಕೂ ಹೆಚ್ಚು ತಾಲೂಕುಗಳಲ್ಲಿ ಅತಿವೃಷ್ಟಿಯಿಂದಾಗಿ ಸುಮಾರು 30 ಸಾವಿರ ಕೋಟಿ ರೂ. ನಷ್ಟವಾಗಿದೆ. ಇದುವರೆಗೆ ಪರಿಹಾರ ಬಿಡುಗಡೆಯಾಗಿಲ್ಲ. ಹೆಚ್ಚಿನ ಪ್ರಮಾಣದಲ್ಲಿ ನೆರೆ ಪರಿಹಾರವನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಬೇಕು. ಈ ಬಗ್ಗೆ ಸಂಜೆ ಸರಕಾರದ ಮುಖ್ಯ ಕಾರ್ಯದರ್ಶಿ ಅವರೊಂದಿಗೆ ರಾಜಭವನದಲ್ಲಿ ಮತ್ತೊಮ್ಮೆ ಪ್ರಧಾನಿಯನ್ನು ಭೇಟಿಯಾಗಿ ರಾಜ್ಯದ ಪರಿಸ್ಥಿತಿಯನ್ನು ಮನವರಿಕೆ ಮಾಡಿಕೊಡಲಾಗುವುದು ಎಂದು ಹೇಳಿದರು.
ಆದರೆ ನಂತರ ಸುಮಾರು 40 ನಿಮಿಷಗಳ ಭಾಷಣ ಮಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, ನೆರೆ ಪರಿಹಾರದ ಬಗ್ಗೆ ಯಾವುದೇ ಪ್ರಸ್ತಾಪ ಮಾಡಿಲ್ಲ. ನೆರೆ ಪರಿಹಾರ ಬಿಡುಗಡೆಗೆ ವೇದಿಕೆಯಲ್ಲೇ ಬಿಎಸ್ವೈ ಮನವಿ ಮಾಡಿದರೂ ಸಹ ಪ್ರಧಾನಿ ಮೋದಿ ಸ್ಪಂದಿಸಲಿಲ್ಲ ಎಂದು ತಿಳಿದುಬಂದಿದೆ.